ವಿದ್ಯುನ್ಮಾನದಿಂದ ಸಂಗೀತದ ಪ್ರಜಾಪ್ರಭುತ್ವೀಕರಣ: ಡಾ.ಮಹಾಬಲೇಶ್ವರ ರಾವ್
ಉಡುಪಿ, ಅ.16: ಸ್ವರಗಳ ಮೂಲಕ ಪರಿಸರವನ್ನು ಸ್ವಚ್ಛಗೊಳಿಸಲು ಸಂಗೀತ ದಿಂದ ಸಾಧ್ಯ. ಸಂಗೀತ ಒಂದು ವಿಶ್ವ ಭಾಷೆ. ವಿದ್ಯುನ್ಮಾನದ ಸಹಾಯದಿಂದ ಸಂಗೀತ ಇಂದು ಎಲ್ಲರೂ ಕಲಿಯಲು ಸಾಧ್ಯವಾಗುವಂತಹ ಕಾಲಘಟ್ಟದಲ್ಲಿ ನಾವಿದ್ದೇವೆ. ಇದು ಸಂಗೀತದ ಪ್ರಜಾಪ್ರಭುತ್ವೀಕರಣ ಎಂದು ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್ ಹೇಳಿದ್ದಾರೆ.
ಸರಿಗಮ ಭಾರತಿ ಸಂಗೀತ ವಿದ್ಯಾಲಯದ ವಿಜಯ ದಶಮಿ ಸಂಗೀತೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿ, ಹಿರಿಯರಿಂದ ಬಂದಂತಹ ಶಾಸ್ತ್ರೀಯ ಸಂಗೀತದಂತಹ ಕಲೆಗಳನ್ನು ಅಭ್ಯಸಿಸಿ, ಅನುಭವಿಸಿ, ಜೀವನದಲ್ಲಿ ಸಹಜ ಸಂತೋಷವನ್ನು ಪಡೆಯಬೇಕು. ಕ್ಷಣಿಕ ಸುಖ ಕೊಡುವ ವಿಷಯಗಳು ಜಾರು ಬಂಡಿಯಂತೆ ನಿಮ್ಮನ್ನು ಖುಷಿ ಪಡಿಸುತ್ತಾ ದೊಡ್ಡ ಪ್ರಪಾತಕ್ಕೆ ದೂಡಿ ಬಿುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಅವರನ್ನು ಸನ್ಮಾನಿಸಲಾಯಿತು. ವಿದ್ಯಾಲಯದ ಮಕ್ಕಳಿಂದ ಪಿಳ್ಳಾರಿ ಗೀತೆಗಳು, ಎಲ್ಲಾ ಕಲಾವಿದರಿಂದ ತ್ಯಾಗರಾಜರ ಪಂಚರತ್ನ ಗೋಷ್ಠಿ ಗಾಯನ, ಹಲವಾರು ಕಿರಿಯ ಕಲಾವಿದರಿಂದ ಕಛೇರಿಗಳು, ವಿದುಷಿ ಲತಾತಂತ್ರಿ ಯವರಿಂದ ಪ್ರಧಾನ ಕಛೇರಿ ನಡೆಯಿತು.