ಉಪ್ಪಿನಂಗಡಿ ಮಾಲಿಕ್ ದೀನಾರ್ ಮಸೀದಿಯಲ್ಲಿ ಮೀಲಾದ್ ಆಚರಣೆ
ಉಪ್ಪಿನಂಗಡಿ, ಅ.19: ದೇಶ ಕವಲುದಾರಿಯಲ್ಲಿ ಸಾಗುತ್ತಿದೆ. ಸೌಹಾರ್ದ, ಐಕ್ಯ ಮರೆಯಾಗುತ್ತಿದೆ. ಆದ್ದರಿಂದ ಅಲ್ಲಲ್ಲಿ ಚದುರಿಕೊಂಡಿರುವ ಜಾತ್ಯತೀತ ಬೇರುಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಂಘಟಿತ ಕಾರ್ಯಕ್ರಮದ ಅನಿವಾರ್ಯ ಇದೆ ಎಂದು ಉಪ್ಪಿನಂಗಡಿ ಮಾಲಿಕ್ ದೀನಾರ್ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಮುಸ್ತಫ ಕೆಂಪಿ ಹೇಳಿದ್ದಾರೆ.
ಮೀಲಾದುನ್ನಬಿ ಪ್ರಯುಕ್ತ ಉಪ್ಪಿನಂಗಡಿ ಮಾಲಿಕ್ ದೀನಾರ್ ಜುಮಾ ಮಸೀದಿಯಲ್ಲಿ ಕೋವಿಡ್ ನಿಯಮಾನುಸಾರ ನಡೆದ ಸರಳ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಎಲ್ಲೆಡೆ ಕೋಮವಾದ ತಲೆಎತ್ತಿ ನಿಂತಿದ್ದರೂ ಅಷ್ಟೇ ಪ್ರಮಾಣದಲ್ಲಿ ಜಾತ್ಯತೀತ ನೆಲೆಗಟ್ಟಿನಲ್ಲಿ ಸೌಹಾರ್ದವನ್ನು ಎತ್ತಿ ಹಿಡಿಯುವ ಜನರು ಎಲ್ಲಾ ಸಮಾಜದಲ್ಲಿ ಇದ್ದಾರೆ. ಅಂತಹ ಸಮಾನ ಮನಸ್ಕರನ್ನು ಒಂದುಗೂಡಿಸಿ ಉಪ್ಪಿನಂಗಡಿ ಮಸೀದಿಯ ನೇತೃತ್ವದಲ್ಲಿ ಮಸ್ಜಿದ್ ದರ್ಶನ್ ಕಾರ್ಯಕ್ರಮ ಹಾಕಿಕೊಳ್ಳವ ಬಗ್ಗೆ ಯೋಜನೆ ಹಾಕಿಕೊಂಡಿರುವುದಾಗಿ ತಿಳಿಸಿದರು.
ಮಸೀದಿಯ ಖತೀಬ್ ನಝೀರ್ ಅಝ್ಹರಿ ಮಾತನಾಡಿ ನಬಿ ದಿನದ ಬಗ್ಗೆ ಸಂದೇಶ ನೀಡಿದರು.
ಸದರ್ ಮುಅಲ್ಲಿಂ ಬಾತಿಶ್ ಅಝ್ಹರಿ, ಮದ್ರಸ ಶಿಕ್ಷಕರಾದ ಅಬ್ದುಲ್ ರಶೀದ್ ಮುಸ್ಲಿಯಾರ್, ಶಬೀರ್ ಅಝ್ಹರಿ, ಹೈದರ್ ಸಅದಿ, ಹಂಝ ಮುಸ್ಲಿಯಾರ್ ಸಂದರ್ಭೋಚಿತವಾಗಿ ಮಾತಾಡಿದರು.
ಸಮಾರಂಭದಲ್ಲಿ ಕಾರ್ಯದರ್ಶಿ ಅಬ್ದುಲ್ ಶುಕೂರ್ ಶುಕ್ರಿಯಾ, ಉಪಾಧ್ಯಕ್ಷರಾದ ಹಾಜಿ ಹಾರೂನ್ ರಶೀದ್ ಅಗ್ನಾಡಿ, ಅಶ್ರಫ್ ಹಾಜಿ, ಜೊತೆ ಕಾರ್ಯದರ್ಶಿ ಎಚ್.ಯೂಸುಫ್ ಹಾಜಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಸಿದ್ದೀಕ್ ಕೆಂಪಿ, ಬಿ.ಕೆ.ಹಮೀದ್, ಮುಹಮ್ಮದ್ ಕೂಟೇಲ್, ಎನ್ಮಾಡಿ ಮುನೀರ್, ಯು.ಟಿ.ಫಯಾಝ್ ಅಹ್ಮದ್, ರವೂಫ್, ಹಮೀದ್ ಕರಾವಳಿ, ಎನ್ಮಾಡಿ ಯೂಸುಫ್ ಹಾಜಿ, ಗ್ರಾಪಂ ಸದಸ್ಯ ಯು.ಟಿ.ತೌಸೀಫ್, ಉಬಾರ್ ಡೋನರ್ಸ್ ಸಂಘಟನೆಯ ಶಬೀರ್ ಕೆಂಪಿ, ಆಚಿ ಕೆಂಪಿ, ಯೂಸುಫ್ ಹಾಜಿ ಪೆದಮಲೆ, ಯು.ಕೆ.ಅಯ್ಯೂಬ್, ಆದಂ ಹಾಜಿ ಮೆಜೆಸ್ಟಿಕ್ ಮತ್ತಿತರರು ಉಪಸ್ಥಿತರಿದ್ದರು.