ಕುಂದಾಪುರ: ಗಾಂಜಾ ಮಾರಾಟ; ಆರೋಪಿ ಬಂಧನ
1.8 ಕೆ.ಜಿ.ಗಾಂಜಾ, ಬ್ರೌನ್ ಶುಗರ್ ವಶ
ಕುಂದಾಪುರ ಅ.22: ನಗರದ ಶಾಸ್ತ್ರಿ ಪಾರ್ಕ್ ವೃತ್ತ ಬಳಿ ಗುರುವಾರ ತಡರಾತ್ರಿ ಗಾಂಜಾ ಸಾಗಾಟ ನಡೆಸಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಕಾರವಾರ ಬಿಣಗಾ ಆಸ್ಬಾಬಾಗ್ನ ಜಾಫರ್ ಗುಡುಮಿಯಾ (28) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ಶಾಸ್ತ್ರಿ ವೃತದ ಬಳಿ ಅನುಮಾನಸ್ಪದವಾಗಿ ತಿರುಗುತ್ತಿದ್ದು, ರಾತ್ರಿ ರೌಂಡ್ಸ್ನ ಕರ್ತವ್ಯದಲ್ಲಿದ್ದ ಕುಂದಾಪುರ ಡಿವೈಎಎಸ್ಪಿ ಶ್ರೀಕಾಂತ್ ಕೆ. ಅವರ ಕಣ್ಣಿಗೆ ಬಿದ್ದಿದ್ದ. ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿರುವುದು ಬೆಳಕಿಗೆ ಬಂದಿದೆ. ತಕ್ಷಣ ಆತನನ್ನು ಬಂಧಿಸಿ ಆತನಿಂದ 40,000 ರೂ. ಬೆಲೆಯ 1 ಕೆಜಿ 810ಗ್ರಾಂ ಗಾಂಜಾ ಹಾಗೂ 10,000 ರೂ. ಬೆಲೆಯ 1 ಗ್ರಾಂ ಬ್ರೌನ್ ಶುಗರ್, ಎರಡು ಮೊಬೈಲ್, 1,500 ರೂ. ನಗದು ವಶ ಪಡಿಸಿಕೊಳ್ಳಲಾಗಿದೆ. ಬಂಧಿತನ ವಿರುದ್ಧ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಉಡುಪಿ ಜಿಲ್ಲಾ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿ ಕುಮಾರ್ ಚಂದ್ರ ಅವರ ಮಾರ್ಗದರ್ಶನದಲ್ಲಿ, ಕುಂದಾಪುರ ಅಪರಾಧ ವಿಭಾಗದ ರಾಘವೇಂದ್ರ ಉಪ್ಪುಂದ, ರಾಮು ಹೆಗ್ಡೆ, ವಿಜಯ್, ರಮೇಶ್, ಕುಂದಾಪುರ ಠಾಣೆಯ ರಾಘವೇಂದ್ರ ಮೊಗೇರ, ವಿಜೇತ್ ಹಾಗೂ ರಾಜು ಕಾರ್ಯಾಚರಣೆ ಯಲ್ಲಿ ಭಾಗವಹಿಸಿದ್ದರು.