ಅ.24ರಂದು ದೈವಸ್ಥಾನ ಜೀರ್ಣೋದ್ಧಾರ ನಿವೇದನಾ ಪತ್ರ ಬಿಡುಗಡೆ
ಮಂಗಳೂರು, ಅ.22: ಅಲೇರಿ ಶ್ರೀ ಸತ್ಯಸಾರಮಾನಿ-ಕಾನದ ಕಟದ ಮೂಲಕ್ಷೇತ್ರ ಅಲೇರಿಬನ ಕಿಜನೊಟ್ಟು ಬರ್ಕೆ ಮಿಜಾರು ಇದರ ವತಿಯಿಂದ ಮೂಲಸ್ಥಾನದ ಪುಣ್ಯ ಭೂಮಿ ಖರೀದಿ ಹಾಗೂ ದೈವಸ್ಥಾನದ ಜೀರ್ಣೋದ್ಧಾರದ ಸಲುವಾಗಿ ನಿವೇದನಾ ಪತ್ರ ಬಿಡುಗಡೆ ಸಮಾರಂಭ ಅ.24ರಂದು ಮಿಜಾರು ಕಿಜನೊಟ್ಟು ಬರ್ಕೆಯಲ್ಲಿ ನಡೆಯಲಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಮಿತಿಯ ಅಧ್ಯಕ್ಷ ಶಿವರಾಜ್ ಪಿ.ಬಿ., ಮೀನುಗಾರಿಕೆ ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಹಾಗೂ ಮಾಜಿ ಸಚಿವ ಬಿ.ರಮಾನಾಥ ರೈಯವರು ನಿವೇದನಾ ಪತ್ರವನ್ನು ಬಿಡುಗಡೆಗೊಳಿಸುವರು.
ಮಾಜಿ ಉಪ ಮುಖ್ಯಮಂತ್ರಿ ದೀಪಪ್ರಜ್ವಲನೆ ಮಾಡಲಿರುವರು. ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಉಮಾನಾಥ ಕೋಟ್ಯಾನ್ ಸೇರಿದಂತೆ ಹಲವು ಮಂದಿ ಗಣ್ಯರು ಭಾಗವಹಿಸುವರು ಎಂದರು.
ಸುಮಾರು 500ರಿಂದ 700 ವರ್ಷಗಳ ಅಂತರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕು ತೆಂಕ ಮಿಜಾರು ಗ್ರಾಮದ ತೋಡಾರು ಬಳಿಯ ‘ಅಲೇರಿಬನ ಕಿಜನೊಟ್ಟು ಬರ್ಕೆ’ ಎಂಬಲ್ಲಿ ಶ್ರೀ ಸತ್ಯ ಸಾರಮಾನಿ ದೈವಗಳಾಗಿ ನೆಲೆಯಾದ ಇವರ ಸಾನಿಧ್ಯವು ತುಳುನಾಡಿನ ಜನಮಾನಸದಲ್ಲಿ ಇಂದು ಅಭಿವೃದ್ಧಿಯನ್ನು ಕಾಣಲೇಬೇಕಾದ ಅಗ್ರಮಾನ್ಯ ಕ್ಷೇತ್ರವಾಗಿದೆ ಎಂದವರು ಹೇಳಿದರು.
ಅಮರ ವೀರರ ಕಾರ್ಣಿಕ ಶಕ್ತಿಯ ಈ ಮೂಲಸ್ಥಾನವನ್ನು ಸುಮಾರು 18.28 ಎಕ್ರೆ ಭೂಮಿಯನ್ನು ಖರೀದಿ ಮಾಡಿ ಇಲ್ಲಿ ಜೀರ್ಣೋದ್ಧಾರ ಮಾಡಲಾಗುತ್ತಿದೆ. ಭೂಮಿ ಖರೀದಿಸಲು 5.11 ಕೋಟಿ ಹಾಗೂ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒಟ್ಟು 18.5 ಕೋಟಿಯ ಅವಶ್ಯಕತೆಯಿದೆ ಎಂದವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಗೌರವಾಧ್ಯಕ್ಷ ಶೇಖರ್ ಬಳ್ಳಾಳ್ ಬಾಗ್, ಕೋಶಾಕಾರಿ ಶೇಖರ್ ಕುಕ್ಕೇಡಿ, ಸಹ ಕಾರ್ಯದರ್ಶಿ ದಿನೇಶ್ ಪಿ.ಎಸ್., ಅವಿನಾಶ್ ಉಪಸ್ಥಿತರಿದ್ದರು.