ಬೆಳ್ವೆ ಚರ್ಚಿನ ಧರ್ಮಗುರುಗಳ ವರ್ಗಾವಣೆ ಆಗ್ರಹಿಸಿ ಪ್ರತಿಭಟನೆ
ಕುಂದಾಪುರ ಅ. 24: ಭಕ್ತಾದಿಗಳಿಗೆ ಅವಹೇಳನ ಮಾಡಿ ಜೀವ ಬೆದರಿಕೆ ಹಾಕಿರುವ ಬೆಳ್ವೆ ಗುಮ್ಮಹೊಲ ಸಂತ ಜೋಸೆಫರ ಚರ್ಚಿನ ಧರ್ಮಗುರುಗಳನ್ನು ವರ್ಗಾವಣೆ ಮಾಡುವಲ್ಲಿ ನಿರ್ಲಕ್ಷ ತೋರುತ್ತಿರುವ ಉಡುಪಿ ಧರ್ಮ ಪ್ರಾಂತ್ಯದ ಆಡಳಿತ ಮಂಡಳಿಯ ಕ್ರಮವನ್ನು ಖಂಡಿಸಿ ಚರ್ಚಿನ ಭಕ್ತರು ರವಿವಾರ ಚರ್ಚಿನ ಎದುರು ಭಕ್ತರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕ್ರೈಸ್ತ ಧರ್ಮದ ಮುಖಂಡ ಪ್ರವೀಣ್ ಲೋಬೊ ಮಾತನಾಡಿ, ವಾರದೊಳಗೆ ಧರ್ಮಗುರುಗಳನ್ನು ವರ್ಗಾವಣೆ ಮಾಡದಿದ್ದರೆ ಅಹೋರಾತ್ರಿ ಧರಣಿ ನಡೆಸಲಾಗುವುದು. ನಮಗೆ ಶಾಂತಿ, ನೆಮ್ಮದಿ, ನ್ಯಾಯ ಸಿಗದಿದ್ದರೆ, ಮುಂದೆ ಕ್ರೈಸ್ತ ಧರ್ಮವನ್ನು ತ್ಯಜಿಸುವ ಬಗ್ಗೆಯೂ ಯೋಚಿಸೇಕಾಗಿದೆ ಎಂದು ಎಚ್ಚರಿಕೆ ನೀಡಿದರು.
ಸುಮಾರು 60 ವರ್ಷಗಳ ಇತಿಹಾಸವಿರುವ ಈ ಚರ್ಚಿಗೆ ಕಳೆದ 3 ತಿಂಗಳ ಹಿಂದೆ ಗುರುಗಳಾಗಿ ಬಂದ ಫಾ.ಅಲೆಕ್ಸಾಂಡರ್ ಲೂವಿಸ್ ಭಕ್ತಾದಿ ಗಳಿಗೆ ಅವಹೇಳನ ಮಾಡಿದ್ದಲ್ಲದೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ಅಲ್ಲದೆ ಅಧಿಕಾರ ದುರುಪಯೋಗಪಡಿಸಿ ಕೊಂಡು ಭಕ್ತರ ಮನಸ್ಸಿಗೆ ಘಾಸಿ ಮಾಡಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಅವರಿಗೂ ಮನವಿ ಸಲ್ಲಿಸಲಾಗಿದೆ. ಆದರೆ ಧರ್ಮಪ್ರಾಂತ್ಯದ ಆಡಳಿತ ಮಂಡಳಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೆ ಫಾದರ್ ಪರವಾಗಿಯೇ ವರ್ತಿಸುತ್ತಿ್ದಾರೆ ಎಂದು ಅವರು ಆರೋಪಿಸಿದರು.
ಈ ಸಂದರ್ಭದಲ್ಲಿ ಶಾಂತಿ ಡೇಸಾ, ಸಿಲ್ವಿಯಾ ಪ್ಲೊರೆಸ್, ಸ್ಯಾಂಡ್ರಾ ಸ್ಯಾಮ್ಸನ್, ಪ್ರೇಮ್ ಪ್ಲೊರೆಸ್, ಬೆಳ್ವೆ ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಸೂರ್ಗೋಳಿ, ಮಾಜಿ ಅಧ್ಯಕ್ಷ ವೈ.ಕರುಣಾಕರ ಶೆಟ್ಟಿ, ಉದಯ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು