ಅ.28ರಂದು ನಿವೃತ್ತ ಬ್ಯಾಂಕ್ ನೌಕರರು- ಅಧಿಕಾರಿಗಳ ಕ್ರೆಡಿಟ್ ಕೊ ಅಪರೇಟಿವ್ ಸಾಮಾನ್ಯ ಸಭೆ
ಮಂಗಳೂರು, ಅ.25: ನಿವೃತ್ತ ಬ್ಯಾಂಕ್ ನೌಕರರ ಹಾಗೂ ಅಧಿಕಾರಿಗಳ ಕ್ರೆಡಿಟ್ ಸೌಹಾರ್ದ ಕೋ ಅಪರೇಟಿವ್ ನಿಯಮಿತದ ಆಶ್ರಯದಲ್ಲಿ ಅ. 28ರಂದು ಪೂರ್ವಾಹ್ನ 11 ಗಂಟೆಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ವಾರ್ಷಿಕ ಸಾಮಾನ್ಯ ಸಭೆ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಸಂಘದ ಅಧ್ಯಕ್ಷ ರವೀಂದ್ರನಾಥ್ ಶೆಟ್ಟಿ, ಕಳೆದ ಸುಮಾರು 2 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಈ ಕೋ ಆಪರೇಟಿವ್ ನಿಯಮಿತ, ಮುಂದಿನ ದಿನಗಳಲ್ಲಿ ಸಂಸ್ಥೆಯ ಎಲ್ಲಾ ವ್ಯವಹಾರಗಳು ಆನ್ಲೈನ್, ಡಿಜಿಟಲ್ ಮೂಲಕ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ ಎಂದರು.
1162 ಸದಸ್ಯರನ್ನು ಹೊಂದಿರುವ ಸಂಸ್ಥೆಯು 108.44 ಲಕ್ಷ ರೂ. ದುಡಿಯುವ ಬಂಡವಾಳ 67.13 ಲಕ್ಷ ರೂ. ಠೇವಣಿ ಹೊಂದಿದ್ದು, 65.78 ಲಕ್ಷ ರೂ.ಗಳನ್ನು ಸಾಲವಾಗಿ ನೀಡಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಉಡುಪಿ ಜಿಲ್ಲೆಯಲ್ಲಿ ಶಾಖೆಯನ್ನು ತೆರೆಯುವ ಉದ್ದೇಶ ಹೊಂದಲಾಗಿದೆ. ಇದಲ್ಲದೆ ಇ- ಸ್ಟಾಂಪ್, ಬಸ್ ಹಾಗೂ ರೈಲು ಟಿಕೆಟ್ ಬುಕ್ಕಿಂಗ್ ಸೇವೆಯನ್ನು ಕೂಡಾ ವಿಸ್ತರಿಸುವ ಉದ್ದೇಶವಿದೆ ಎಂದು ಅವರು ಹೇಳಿದರು.
ಸಂಸ್ಥೆಯು ಸೇವಿಂಗ್ಸ್ ಬ್ಯಾಂಕ್ ಖಾತೆಗೆ ವಾರ್ಷಿಕ ಶೇ. 5 ಬಡ್ಡಿಯನ್ನು ನೀಡುತ್ತಿದೆ. ರಿಕರಿಂಗ್ ಡೆಪಾಸಿಟ್ ಬಗ್ಗೆ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 7.57 ಲಕ್ಷ ರೂ. ಠೇವಣಿ ಸಂಗ್ರಹಿಸಲಾಗಿದೆ. ಸಂಸ್ಥೆಯು ಸ್ಪರ್ಧಾತ್ಮಕ ಬಡ್ಡಿ ದರದಲ್ಲಿ ವಾಹನ ಸಾಲ, ಚಿನ್ನಾಭರಣಗಳ ಈಡಿನ ಸಾಲ, ಅಡಮಾನ ಸಾಲ, ವೇತನಾಧರಿತ ಜಾಮೀನು ಸಾಲವನ್ನು ನೀಡುತ್ತಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ದಿನಕರ ಪೂಂಜಾ, ನಿರ್ದೇಶಕರಾದ ಶಾಲಿನಿ ಶೆಟ್ಟಿ, ವಿಶ್ವನಾಥ್, ಶ್ಯಾಮ ಸುಂದರ ರಾವ್, ನರೇಂದ್ರನಾಥ ಕಾಮತ್, ಸಿಇಓ ಗಣೇಶ್ ಪ್ರಭು ಉಪಸ್ಥಿತರಿದ್ದರು.