ಕಾರ್ಕಳದ ಮುಖ್ಯ ರಸ್ತೆಗಳ ದುರಸ್ತಿಗೆ ಆಗ್ರಹಿಸಿ ಕಾಂಗ್ರೆಸ್ ಧರಣಿ
ಪುರಸಭೆ ಮಾಸಿಕ ಸಭೆ
ಕಾರ್ಕಳ, ಅ.25: ಕಾರ್ಕಳ ಪುರಸಭಾ ಮುಖ್ಯ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿ ವಿಪಕ್ಷ ಕಾಂಗ್ರೆಸ್ ಸದಸ್ಯರು ಸೋಮವಾರ ನಡೆದ ಪುರಸಭಾ ಮಾಸಿಕ ಸಭೆಯಲ್ಲಿ ಸದನ ಬಾವಿಗಿಳಿದು ಧರಣಿ ನಡೆಸಿದರು
ವಿಪಕ್ಷ ಮುಖಂಡ ಅಶ್ಪಾಕ್ ಅಹ್ಮದ್ ನೇತೃತ್ವದಲ್ಲಿ ಧರಣಿ ನಡೆಸಿದ ವಿಪಕ್ಷ ಸದಸ್ಯರು, ಒಳಚರಂಡಿ ಕಾಮಗಾರಿ ಅವೈಜ್ಞಾನಿಕ ವಿಧಾನದಲ್ಲಿ ನಡೆಸಿರುವುದರಿಂದ ರಸ್ತೆ ಗುಂಡಿಗಳಿಂದ ತುಂಬಿ ಹೋಗಿವೆ. ಈ ಬಗ್ಗೆ ಹಲವಾರು ಬಾರಿ ದೂರುಗಳನ್ನು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದನ್ನು ಸರಿಪಡಿಸುವ ವರೆಗೆ ಧರಣಿ ಹಿಂಪಡೆಯುವುದಿಲ್ಲ ಪಟ್ಟು ಹಿಡಿದರು
ಸದಸ್ಯ ಶುಭದ ರಾವ್ ಮಾತನಾಡಿ, ಕಾರ್ಕಳ ದ ಮುಖ್ಯರಸ್ತೆ, ಮಣ್ಣಗೋಪುರ, ಮೂರು ಮಾರ್ಗ, ಮಂಗಳೂರು ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಕೂಡಲೇ ಸರಿಪಡಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಸದಸ್ಯರಾದ ವಿನ್ನಿಬೋಲ್ಡ್, ರಹ್ಮತ್ ಎನ್. ಶೇಖ್, ಸೋಮನಾಥ ನಾಯ್ಕ, ಪ್ರತಿಮಾ ರಾಣೆ, ನಳಿನಿ ಆಚಾರ್ಯ, ಹರೀಶ್ ದೇವಾಡಿಗ, ಪ್ರಭಾ ಕಿಶೋರ್ ಧ್ವನಿಗೂಡಿಸಿದರು.
ಈ ಸಂಧರ್ಭದಲ್ಲಿ ಅದ್ಯಕ್ಷೆ ಸುಮಾ ಕೇಶವ್ ಮಾತನಾಡಿ, ಮಳೆಗಾಲ, ಅಕಾಲಿಕ ಮಳೆಯಿಂದಾಗಿ ಕೆಲಸಗಳು ನಿಗದಿತ ಸಮಯದಲ್ಲಿ ನಡೆಸಲು ಅಸಾಧ್ಯವಾಗಿದೆ. ಇದೀಗ ಸಂಬಂದಪಟ್ಟ ಗುತ್ತಿಗೆದಾರರಿಗೆ ಸರಿಪಡಿಸುವಂತೆ ತಿಳಿಸಲಾಗಿದೆ. ಮಾತ್ರವಲ್ಲ ಉಳಿದ ಕಡೆಗೂ ರಸ್ತೆ ದುರಸ್ತಿಗೆ ಬೇರೆ ನಿಧಿಯಿಂದ ಹಣ ವಿನಿಯೋಗಿಸಲಾಗುವುದು ಎಂದರು
ಬಳಿಕ ವಿಪಕ್ಷ ಸದಸ್ಯರು ಧರಣಿ ಹಿಂಪಡೆದು ಮಾಸಿಕ ಸಭೆಯಲ್ಲಿ ಭಾಗವಹಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್, ಸ್ಥಾಯಿ ಸಮಿತಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ಮಲ್ಯ, ಮುಖ್ಯಾಧಿಕಾರಿ ರೂಪಾ ಶೆಟ್ಟಿ ಉಪಸ್ಥಿತರಿದ್ದರು
ಆಡಳಿತ ಪಕ್ಷದ ಸದಸ್ಯರಾದ ಯೋಗಿಶ್ ದೇವಾಡಿಗ ,ಶೋಭಾ ದೇವಾಡಿಗ, ಪ್ರದೀಪ್ ಮಾರಿಗುಡಿ, ನೀತಾ ಆಚಾರ್ಯ, ಮಮತಾ, ಶಶಿಕಲಾ ಶೆಟ್ಟಿ, ಭಾರತಿ ಅಮೀನ್, ಮೀನಾಕ್ಷಿ ಗಂಗಾಧರ್, ನಾಮನಿರ್ದೇಶನ ಸದಸ್ಯರಾದ ಅವಿನಾಶ್ ಶೆಟ್ಟಿ, ಪ್ರಸನ್ನ, ಸಂತೋಷ್ ರಾವ್,ಅಶೋಕ್ ಸುವರ್ಣ, ಸಂಧ್ಯಾ ಮಲ್ಯ ಉಪಸ್ಥಿತರಿದ್ದರು.