ಹಡಿಲು ಭೂಮಿ ಕೃಷಿ ಗದ್ದೆಯಲ್ಲಿ ಕನ್ನಡ ಗೀತಗಾಯನ
ಉಡುಪಿ, ಅ.28: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ‘ಮಾತಾಡ್ ಮಾತಾಡ್ ಕನ್ನಡ’, ‘ಕನ್ನಡಕ್ಕಾಗಿ ನಾವು’ ಕರ್ನಾಟಕ ರಾಜ್ಯೋತ್ಸವ ಅಭಿಯಾನದ ಅಂಗವಾಗಿ ಆಯೋಜಿಸಿದ ಏಕಕಾಲದಲ್ಲಿ ಕನ್ನಡ ಗೀತಗಾಯನ ಇಂದು ಉಡುಪಿ ಆಸುಪಾಸಿನ ಹಡಿಲು ಭೂಮಿಯ ಕೃಷಿಗದ್ದೆಗಳಲ್ಲೂ ನಡೆದವು.
ಶಾಸಕ ಕೆ.ರಘುಪತಿ ಭಟ್ ಅಧ್ಯಕ್ಷತೆಯ ಕೇದಾರೋತ್ಥಾನ ಟ್ರಸ್ಟ್ ವತಿಯಿಂದ ಅಂಬಲಪಾಡಿ ಗ್ರಾಪಂ ವ್ಯಾಪ್ತಿಯ ಕುಂಜಗುಡ್ಡೆ ಹಾಗೂ ಕಡೆಕಾರು ಗ್ರಾಪಂ ವ್ಯಾಪ್ತಿಯ ಹಡಿಲು ಭೂಮಿ ಕೃಷಿ ಭತ್ತದ ಪೈರಿನ ಕಟಾವಿನ ಸಂದರ್ಭದಲ್ಲಿ ಮೂರು ಕನ್ನಡ ಹಾಡುಗಳನ್ನು ಶಾಲಾ-ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಟ್ರಸ್ಟ್ನ ಪದಾಧಿಕಾರಿಗಳು ಹಾಗೂ ನೆರೆದ ಗ್ರಾಮಸ್ಥರು ಹಾಡಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ದಿನಕರಬಾಬು, ಕೇದರೋತ್ಥಾನ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಮುರಳಿ ಕಡೆಕಾರ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ರಾಘವೇಂದ್ರ ಕಿಣಿ, ಬಿಜೆಪಿ ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಯೋಗೀಶ್ ಶೆಟ್ಟಿ ಅಂಬಲಪಾಡಿ, ಉಡುಪಿ ತಾಪಂ ಮಾಜಿ ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಅಂಬಲಪಾಡಿ ಗ್ರಾಪಂ ಸದಸ್ಯರಾದ ಭಾರತಿ ಭಾಸ್ಕರ್, ರಾಜೇಶ್ ಸುವರ್ಣ ಮುಂತಾದವರು ಉಪಸ್ಥಿತರಿದ್ದರು.