ಅ.30ರಂದು ‘ಅವ್ಯಾನ್’ ಸಿಎ ವಿದ್ಯಾರ್ಥಿಗಳ ಸಮಾವೇಶ
ಉಡುಪಿ, ಅ.28: ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆಯ ಉಡುಪಿ ಶಾಖೆಯ ವತಿಯಿಂದ ‘ಅವ್ಯಾನ್ -2021’ ಸಿಎ ವಿದ್ಯಾರ್ಥಿಗಳ ಸಮಾವೇಶವನ್ನು ಅ.30ರಂದು ಬೆಳಗ್ಗೆ 9.30ಕ್ಕೆ ಮಣಿಪಾಲದ ಡಾ.ಟಿಎಂಎ ಪೈ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲೆಕ್ಕಪರಿ ಶೋಧಕ ವಿದ್ಯಾರ್ಥಿ ಸಂಘದ ಅಧ್ಯಕ್ಷ ನರಸಿಂಹ ನಾಯಕ್, ಸಮಾವೇಶವನ್ನು ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಉಡುಪಿ ಸಹಾಯಕ ಆಯುಕ್ತೆ ಡಾ. ನಿಮಿಷಾಂಬ ಸಿ.ಪಿ. ಉದ್ಘಾಟಿಸಲಿರುವರು. ಸಂಜೆ 5ಗಂಟೆಗೆ ನಡೆಯುವ ಸಮಾ ರೋಪದಲ್ಲಿ ಜಿಪಂ ಸಿಇಓ ಡಾ.ನವೀನ್ ಭಟ್ ಭಾಗವಹಿಸಲಿರುವರು ಎಂದರು.
ಸಮಾವೇಶದಲ್ಲಿ 250ರಿಂದ 300 ವಿದ್ಯಾರ್ಥಿಗಳು ಪಾಲ್ಗೊಳ್ಳಲಿರುವರು. ನೇರ ತೆರಿಗೆ, ಸರಕು ಮತ್ತು ಸೇವಾ ತೆರಿಗೆ, ಲೆಕ್ಕ ಶಾಸ್ತ್ರ, ಲೆಕ್ಕ ಪರಿಶೋಧನೆ, ಕಾನೂನು, ಮಾಹಿತಿ ತಂತ್ರಜ್ಞಾನಗಳಂತಹ ವಿಷಯಗಳ ಮೇಲೆ ಪ್ರಬಂಧ ಮಂಡನೆಯಾಗಲಿದೆ. ಮನೋ ಒತ್ತಡ ನಿರ್ವಹಣೆ ಬಗ್ಗೆ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಹಾಗೂ ಅರೇಕ ಟೀ ಸ್ಥಾಪಕ ನಿವೇದನ್ ಅವರಿಂದ ಪ್ರೇರಣಾ ಉಪನ್ಯಾಸ ನಡೆಯಲಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿಎ ಉಡುಪಿ ಶಾಖಾ ಅಧ್ಯಕ್ಷೆ ಕವಿತಾ ಎಂ.ಪೈ., ಕಾರ್ಯದರ್ಶಿ ಪ್ರದೀಪ್ ಜೋಗಿ, ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಅಮಲೀನ್, ಕಾರ್ಯಕ್ರಮ ಸಂಯೋಜಕಿ ಅರ್ಪಿತಾ ಉಪಸ್ಥಿತರಿದ್ದರು.