ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ಸಿಎಫ್ಐ ಪ್ರತಿಭಟನೆ
ಉಡುಪಿ, ಅ.28: ಕೇಂದ್ರ ಸರಕಾರದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿ ಹಾಗೂ ಅದನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗುರುವಾರ ಉಡುಪಿ ನಗರದಲ್ಲಿ ಮಾರ್ಚ್ ನಡೆಸಿ ಪ್ರತಿಭಟಿಸಿದರು.
ನಗರದ ಜೋಡುಕಟ್ಟೆಯಿಂದ ಆರಂಭಗೊಂಡ ಮಾರ್ಚ್ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ನಲ್ಲಿ ಸಮಾಪ್ತಿಗೊಂಡಿತು. ಬಳಿಕ ನಡೆದ ಸಭೆಯನ್ನು ದ್ದೇಶಿಸಿ ಮಾತನಾಡಿದ ಸಿಎಫ್ಐ ರಾಜ್ಯ ಕಾರ್ಯದರ್ಶಿ ಅಲ್ತಾಫ್ ಹೊಸಪೇಟೆ, ಎಲ್ಲೂ ಚರ್ಚಿಸದೆ ಹಿಂಬದಿ ಬಾಗಿಲಿನ ಮೂಲಕ ಜಾರಿಗೊಳಿಸಲಾಗುತ್ತಿರುವ ಈ ನೀತಿಯು ಶಿಕ್ಷಣವನ್ನು ಕೇಂದ್ರೀಕರಿಸುವುದರೊಂದಿಗೆ ಖಾಸಗೀಕರಣಕ್ಕೆ ಒತ್ತು ನೀಡುವ ಹಾಗೂ ಶಿಕ್ಷಣವನ್ನು ಕೇಸರೀಕರಣಗೊಳಿಸುವ ಹುನ್ನಾರ ಹೊಂದಿದೆ ಎಂದು ಆರೋಪಿಸಿದರು.
ಗೊಂದಲದ ಗೂಡಾಗಿರುವ ಈ ನೀತಿಯನ್ನು ಇದೀಗ ಕರ್ನಾಟಕದಲ್ಲಿ ಯಾವುದೇ ಚರ್ಚೆ ನಡೆಸದೆ ಜಾರಿಗೊಳಿಸಿರುವುದು ಖಂಡನೀಯ. ಪ್ರಸ್ತುತ, ಹೊಸ ಶಿಕ್ಷಣ ನೀತಿಯ ಕುರಿತು ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗುತ್ತಿದ್ದರೂ ಹಠಮಾರಿ ಧೋರಣೆಯೊಂದಿಗೆ ಉನ್ನತ ಶಿಕ್ಷಣದಲ್ಲಿ ಈ ನೀತಿ ಜಾರಿಗೊಳಿಸಿ ದ್ದಾರೆ. ಇದರ ಕುರಿತು ಚರ್ಚೆ ನಡೆಸಿ ಈ ನೀತಿಯನ್ನು ಹಿಂಪಡೆಯಬೇಕೆಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಿಎಫ್ಐ ಜಿಲ್ಲಾ ಮುಖಂಡ ನವಾಝ್ ಶೇಕ್, ಜಿಲ್ಲಾ ಅಧ್ಯಕ್ಷ ಅಸೀಲ್ ಅಕ್ರಮ್, ಕಾರ್ಯದರ್ಶಿ ಸಾದಿಕ್, ಕುಂದಾಪುರ ಅಧ್ಯಕ್ಷ ಮುಜಾಹೀದ್, ಕಾರ್ಯದರ್ಶಿ ಸಿಯಾನ್, ಜಿಲ್ಲಾ ನಾಯಕಿ ಝಮಝಮ್ ಮೊದಲಾದವರು ಉಪಸ್ಥಿತರಿದ್ದರು.