ಕಾಪು ಬೀಚ್ನಲ್ಲಿ 'ಕನ್ನಡಕ್ಕಾಗಿ ನಾವು ಸಮೂಹ ಗಾಯನ'
ಕಾಪು : ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಕನ್ನಡಕ್ಕಾಗಿ ನಾವು ಸಮೂಹ ಗಾಯನ ಅಭಿಯಾನ ಕಾಪು ಲೈಟ್ ಹೌಸ್ ಬೀಚ್ನಲ್ಲಿ ಕನ್ನಡದ ಶ್ರೇಷ್ಠತೆಯನ್ನು ಸಾರುವ ಬಾರಿಸು ಕನ್ನಡ ಡಿಂಡಿಮವ, ಜೋಗದ ಸಿರಿ ಬೆಳಕಿನಲ್ಲಿ, ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಎಂಬ ಮೂರು ಗೀತೆಗಳನ್ನು ಹಾಡಲಾಯಿತು.
ಕಾಪು ತಾಲ್ಲೂಕು ಆಡಳಿತ ಆಯೋಜಿಸಿದ ಕಾರ್ಯಕ್ರಮದಲ್ಲಿ ಕಾಪು ತಹಶಿಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ, ತಮಟೆ ಬಡಿಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾಪುವಿನ ಶಾಲಾ ಕಾಲೇಜು ವಿದ್ಯಾರ್ಥಿಗಳು, ಆರೋಗ್ಯ ಇಲಾಖಾ ಸಿಬ್ಬಂದಿಗಳು, ಪೊಲೀಸ್ ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಗೃಹ ರಕ್ಷಕ ದಳ, ಕನ್ನಡ ಸಾಹಿತ್ಯ ಪರಿಷತ್ತು, ಅರಣ್ಯ ಇಲಾಖಾ ಸಿಬ್ಬಂದಿ ಸಹಿತ ವಿವಿಧ ಸಂಘ ಸಂಸ್ಥೆಗಳ ಸಿಬ್ಬಂದಿಗಳು, ಅಟೋ ಚಾಲಕರು ಸಹಿತ 600 ಕ್ಕಿಂತಲೂ ಹೆಚ್ಚಿನ ಸಾರ್ವಜನಿಕರು ಸಮೂಹ ಗಾಯನದಲ್ಲಿ ಭಾಗಿ ಯಾದರು.
ಕಾರ್ಯಕ್ರಮದಲ್ಲಿ ಬಿಸಿಲ ಬೇಗೆಗೆ ವಿದ್ಯಾರ್ಥಿಗಳು ಬಳಲಿದರು. ಅವರನ್ನು ಶಾಲೆಯ ಶಿಕ್ಷಕರು ಕರೆದುಕೊಂಡು ಹೋಗಿ ಉಪಚರಿಸಿದರು. ಸಮೂಹ ಗಾಯನದ ವೇಳೆ ವಿದ್ಯಾರ್ಥಿಗಳು ತಮ್ಮ ಕೈಯಲ್ಲಿದ್ದ ಕನ್ನಡ ಧ್ವಜವನ್ನು ಮೇಲಕೆತ್ತಿ ಸಂಭ್ರಮಿಸಿದರು.
ಕಾಪು ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ ಮಾತನಾಡಿ, ಸರ್ಕಾರದ ಆದೇಶದಂತೆ ಕನ್ನಡದ ಶ್ರೇಷ್ಠತೆಯನ್ನು ಸಾರುವ ಗೀತ ಗಾಯನವನ್ನು ಅಯೋಜನೆ ಮಾಡಿದ್ದೇವೆ. ಕನ್ನಡ ಭಾಷೆ, ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲರೂ ಕೈ ಜೋಡಿ ಸೋಣ ಎಂದರು.
ಈ ಸಂದರ್ಬ ಕಾಪು ಪುಸಭಾಧಿಕಾರಿ ವೆಂಕಟೇಶ್ ನಾವಡ, ಉಪ ತಹಶಿಲ್ದಾರ್ ರವಿಶಂಕರ್ ಮತ್ತು ಅಶೋಕ್ ಕೋಟೆಕಾರ್, ಶಿಕ್ಷಣ ಸಂಯೋಜಕ ಶಂಕರ್ ಸುವರ್ಣ, ಪೊಲೀಸ್ ವೃತ್ತ ನಿರೀಕ್ಷಕ ಪ್ರಕಾಶ್, ಠಾಣಾಧಿಕಾರಿ ರಾಘವೇಂದ್ರ ಸಿ, ಅರಣ್ಯಾಧಿಕಾರಿ ಜೀವನ್ ದಾಸ್ ಶೆಟ್ಟಿ, ಮಾಜಿ ಪುರಸಭಾಧ್ಯಕ್ಷ ಅನಿಲ್ ಕುಮಾರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶಶಿಕಾಂತ್ ಪಡುಬಿದ್ರಿ, ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸುಧಾಮ ಶೆಟ್ಟಿ, ಕಾಪು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಮತ್ತಿತರರು ಉಪಸ್ತಿತರಿದ್ದರು. ಗುರು ಚರಣ್ ಕಾರ್ಯಕ್ರಮವನ್ನು ನಿರೂಪಿಸಿದರು.