ಮಹಿಳೆಗೆ ಜಾತಿ ನಿಂದನೆ, ಬೆದರಿಕೆ ಹಾಕಿದ ಪ್ರಕರಣ: ಆರೋಪಿಯನ್ನು ದೋಷಮುಕ್ತಗೊಳಿಸಿದ ನ್ಯಾಯಾಲಯ
ಮಂಗಳೂರು, ಅ.29: ನಗರದ ಯೆಯ್ಯಾಡಿ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ಜಾತಿನಿಂದನೆ ಮತ್ತು ಬೆದರಿಕೆ ಹಾಕಿದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ. ಬೇಬಿ ಎಂಬವರು ಖುಲಾಸೆಗೊಂಡವರು.
ನಗರದ ಯೆಯ್ಯಾಡಿ ಕೈ ಮಗ್ಗ ಮತ್ತು ಜವಳಿ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಗ್ರೂಪ್ ಡಿ ನೌಕರರಾದ ಪಾರ್ವತಿ ಎಂಬವರ ಬಳಿ ಆರೋಪಿ ಬೇಬಿ 2016 ಜು.11ರಂದು ಮಹಿಳೆಯೊಬ್ಬರ ಬಗ್ಗೆ ಜಾತಿ ನಿಂದನೆ ಮಾಡಿದ್ದಾರೆ. ಇಷ್ಟು ಮಾತ್ರವಲ್ಲದೆ ಈ ಬಗ್ಗೆ ಪೊಲೀಸ್ ದೂರು ನೀಡಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಅಭಯ್ ಧನ್ಪಾಲ್ ಚೌಗಲ್ ಸೂಕ್ತ ಸಾಕ್ಷಾಧಾರದ ಕೊರತೆ ಹಿನ್ನೆಲೆಯಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿದ್ದಾರೆ.ಆರೋಪಿಯ ಪರವಾಗಿ ವಕೀಲ ರಾಘವೇಂದ್ರ ರಾವ್, ಗೌರಿ ಶೆಣೈ ಮತ್ತು ಸುಪ್ರಿಯಾ ಆಚಾರ್ಯ ವಾದಿಸಿದ್ದರು.