ಸಮಸ್ತ ವಿದ್ಯಾಬ್ಯಾಸ ಬೋರ್ಡ್ ನೂತನ ಅಧ್ಯಕ್ಷರಾಗಿ ಶೈಖುನಾ ಪಿ.ಕೆ.ಮೂಸ ಕುಟ್ಟಿ
ಬಿ.ಸಿ.ರೋಡ್ : ಸಮಸ್ತ ಕೇರಳ ಮತ ವಿದ್ಯಾಬ್ಯಾಸ ಬೋರ್ಡ್ ಇದರ ನೂತನ ಅಧ್ಯಕ್ಷರಾಗಿ ಶೈಖುನಾ ಪಿ.ಕೆ.ಮೂಸ ಕುಟ್ಟಿ ಹಝ್ರತ್ ಆಯ್ಕೆಯಾಗಿದ್ದಾರೆ. ಶೈಖುನಾ ಪಿ.ಕೆ.ಪಿ. ಅಬ್ದುಸ್ಸಲಾಂ ಉಸ್ತಾದರ ನಿಧನ ದಿಂದ ತೆರವಾದ ಈ ಹುದ್ದೆಗೆ ಕಲ್ಲಿಕೋಟೆಯ ಸಮಸ್ತ ಕೇಂದ್ರ ಕಚೇರಿಯಲ್ಲಿ ನಡೆದ ಸಮಸ್ತ ಕೇರಳ ಮತ ವಿದ್ಯಾಬ್ಯಾಸ ಬೋರ್ಡ್ ನ ಕಾರ್ಯಕಾರಿ ಸಭೆಯಲ್ಲಿ ಈ ಆಯ್ಕೆ ನಡೆಯಿತು.
1949 ರಲ್ಲಿ ಮಲಪ್ಪುರಂ ಜಿಲ್ಲೆಯ ಕೊಳಕಾಡ್ ನಿವಾಸಿ ಕುಂಞಿ ಮುಹಮ್ಮದ್ ಮುಸ್ಲಿಯಾರ್ - ಖತೀಜ ದಂಪತಿ ಪುತ್ರನಾಗಿ ಜನಿಸಿದ ಹಝ್ರತ್ ಪ್ರಾಥಮಿಕ ಶಿಕ್ಷಣವನ್ನು ಅಲ್ಲೇ ಪಡೆದು ಉನ್ನತ ವ್ಯಾಸಂಗಕ್ಕಾಗಿ 1969 ರಲ್ಲಿ ವೆಲ್ಲೂರು ಬಾಖಿಯಾತ್ ಸ್ವಾಲಿಯಾತ್ ಗೆ ಸೇರ್ಪಡೆ ಗೊಂಡು ಬಾಖವಿ ಬಿರುದು ಪಡೆದುಕೊಂಡರು.
ವೆಲ್ಲೂರು ಲತೀಫಿಯ್ಯಾ ಬಾಖಿಯಾತು ಸ್ವಾಲಿಹಾತ್, ತಿರುವನಂತಪುರಂ ಮನ್ನಾನಿಯ್ಯಾ ಕಾಲೇಜುಗಳಲ್ಲಿ 40 ವರ್ಷಗಳ ಕಾಲ ಗುರುಗಳಾಗಿದ್ದ ಅವರು ಪ್ರಸ್ತುತ ನಂದಿ ದಾರುಸ್ಸಲಾಂ ಅರೆಬಿಕ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
2009 ರಿಂದ ದಾರಿಮಿ ಬಿರುದು ಪಡೆದ ಸಹಸ್ರಾರು ಮಂದಿಯ ಪೈಕಿ ಕರ್ನಾಟಕ ದಲ್ಲಿರುವ ಸಾವಿರಾರು ದಾರಿಮಿಗಳು ಇವರ ಶಿಷ್ಯಂದಿರಾಗಿ ದ್ದಾರೆ. ಈ ಮೂಲಕ ಇವರು ಕರ್ನಾಟಕ ದೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಸಮಸ್ತ ಕೇಂದ್ರ ಮುಶಾವರ ಸದಸ್ಯರೂ ಆಗಿರುವ ಶೈಖುನಾ ಪಿ.ಕೆ.ಮೂಸ ಕುಟ್ಟಿ ಹಝ್ರತ್ ಅವರು ಅರೆಬಿಕ್, ಇಂಗ್ಲಿಷ್, ಉರ್ದು, ಮಲಯಾಳಂ ಸಹಿತ ಬಹು ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದು ಹಲವು ಗ್ರಂಥಗಳನ್ನು ರಚಿಸಿದ್ದಾರೆ.
ಶೈಖುನಾ ಪಿ.ಕೆ.ಮೂಸ ಕುಟ್ಟಿ ಹಝ್ರತ್ ಅವರ ಈ ಆಯ್ಕೆಯನ್ನು ದ.ಕ. ಜಿಲ್ಲಾ ಮದರಸ ಮೆನೇಜ್ ಮೆಂಟ್ ಅಧ್ಯಕ್ಷ ಐ. ಮೊಯಿದಿನಬ್ಬ ಹಾಜಿ, ಕಾರ್ಯದರ್ಶಿ ಹಾಜಿ. ಕೆ. ಮುಹಮ್ಮದ್ ರಫೀಕ್, ಜಮೀಯ್ಯತುಲ್ ಮುಅಲ್ಲಿಮೀನ್ ಒಕ್ಕೂಟದ ಅಧ್ಯಕ್ಷ ಸಂಶುದ್ದೀನ್ ದಾರಿಮಿ, ಕಾರ್ಯದರ್ಶಿ ಮುಂಡೋಳೆ ಮುಹಮ್ಮದ್ ಮುಸ್ಲಿಯಾರ್ ಸ್ವಾಗತಿಸಿದ್ದಾರೆ.