ಶಿರ್ವ ನಡಿಬೆಟ್ಟು ಸಾಂಪ್ರದಾಯಿಕ ಜೋಡುಕರೆ ಕಂಬಳ ಸಂಪನ್ನ
ಶಿರ್ವ, ನ.28: ತುಳುನಾಡಿನ ಐತಿಹಾಸಿಕ ಹಿನ್ನೆಲೆಯಿರುವ 26ನೇ ವರ್ಷದ ಶಿರ್ವ ನಡಿಬೆಟ್ಟು ಸೂರ್ಯ-ಚಂದ್ರ ಸಂಪ್ರದಾಯ ಬದ್ಧ ಕಂಬಳವು ರವಿವಾರ ನಡಿಬೆಟ್ಟು ಕಂಬಳ ಗದ್ದೆಯಲ್ಲಿ ನಡೆಯಿತು.
ಎಲ್ಲೂರು ಶ್ರೀವಿಶ್ವೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಪ್ರಫುಲ್ಲ ಶೆಟ್ಟಿ ಜೋಡುಕರೆಗೆ ಕಾಯಿ ಒಡೆಯುವುದರ ಮೂಲಕ ಸಾಂಪ್ರದಾಯಿಕ ಕಂಬಳಕ್ಕೆ ಚಾಲನೆ ನೀಡಿದರು. ಶತಮಾನಗಳಿಂದ ನಡೆದು ಬರುತ್ತಿರುವ ನಡಿಬೆಟ್ಟು ಕಂಬಳವು ನಡಿಬೆಟ್ಟು ಚಾವಡಿಯ ದೈವ ಜುಮಾದಿಗೆ ಪೂಜೆ ಪುರಸ್ಕಾರ ನಡೆದ ಬಳಿಕ ಬಂಟ ಕೋಲ ನಡೆದು ಮೆರವಣಿಗೆಯಲ್ಲಿ ಕಂಬಳದ ಕೋಣಗಳನ್ನು ಗದ್ದೆಗಿಳಿಸಲಾಯಿತು.
ಹಗ್ಗ ಕಿರಿಯ ವಿಭಾಗದಲ್ಲಿ 30 ಜತೆ ಕೋಣಗಳು ಮತ್ತು ಸಬ್ಜೂನಿಯರ್ ವಿಭಾಗದಲ್ಲಿ 15 ಜತೆ ಒಟ್ಟು 45 ಜತೆ ಕೋಣಗಳು ಕಂಬಳದಲ್ಲಿ ಭಾಗವಹಿಸಿ ದ್ದವು. ಮನೆತನದ ಕೋಣಗಳನ್ನು ಗದ್ದೆಗಿಳಿಸಿ ಓಡಿಸುವುದರೊಂದಿಗೆ ಸಾಂಪ್ರದಾಯಿಕ ಜೋಡುಕರೆ ಕಂಬಳ ಸಂಪನ್ನಗೊಂಡಿತು.
ಶಿರ್ವ ಗ್ರಾಪಂ ಅಧ್ಯಕ್ಷ ಕೆ.ಆರ್.ಪಾಟ್ಕರ್, ಶಿರ್ವ ಆರೋಗ್ಯ ಮಾತಾ ದೇವಾ ಲಯದ ಪ್ರಧಾನ ಧರ್ಮಗುರು ರೆ.ಫಾ.ಡೆನ್ನಿಸ್ ಡೇಸಾ, ಸಹಾಯಕ ಧರ್ಮ ಗುರು ಫಾ.ರೋಲ್ವಿನ್ ಅರಾನ್ಹಾ, ಅಟ್ಟಿಂಜ ಶಂಭು ಶೆಟ್ಟಿ, ಮನೋಜ್ ಹೆಗ್ಡೆ, ಸೊರ್ಕಳ ಸಚ್ಚಿದಾನಂದ ಹೆಗ್ಡೆ, ಎಸ್.ಕೆ.ಸಾಲ್ಯಾನ್, ಸೂಡ ಪ್ರಶಾಂತ್ ಕುಮಾರ್ ಶೆಟ್ಟಿ, ಕೋಡು ಸದಾನಂದ ಶೆಟ್ಟಿ, ಸುಂದರ ಶೆಟ್ಟಿ, ಶೇಕರ ಶೆಟ್ಟಿ, ಕಾನಬೆಟ್ಟು ಬಡ್ಡು ಪೂಜಾರಿ, ಗ್ರಾಪಂ ಸದಸ್ಯ ಪ್ರವೀಣ್ ಸಾಲಿಯಾನ್, ರಾಜೇಶ್ ನಾಯ್ಕಾ, ಸುರೇಂದ್ರ ಪೂಜಾರಿ ಕೊಪ್ಪಲ, ವೀರೇಂದ್ರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.