ಭಕ್ತರೇ ಧರ್ಮಸ್ಥಳದ ಸಂಪತ್ತು : ಡಾ. ವೀರೇಂದ್ರ ಹೆಗ್ಗಡೆ
ಲಕ್ಷ ದೀಪೋತ್ಸವಕ್ಕೆ ಚಾಲನೆ
ಬೆಳ್ತಂಗಡಿ; ಜನರ ಪ್ರೀತಿ, ಅವರು ಕ್ಷೇತ್ರದ ಮೇಲೆ ಇಟ್ಟಿರುವ ನಂಬಿಕೆ ಇವುಗಳೇ ಕ್ಷೇತ್ರದ ಅತಿ ದೊಡ್ಡ ಸಂಪತ್ತಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಲಕ್ಷದೀಪೋತ್ಸವದ ಪ್ರಯುಕ್ತ ಉಜಿರೆಯಿಂದ ಧರ್ಮಸ್ಥಳವರೆಗೆ ನಡೆದ ಒಂಭತ್ತನೆಯ ವರ್ಷದ 'ಭಕ್ತರ ಪಾದಯಾತ್ರೆ'ಯನ್ನು ಸ್ವಾಗತಿಸಿ, ಅಮೃತವರ್ಷಿಣಿ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜನಹಿತವಾಗುವ, ಜನಪರವಾಗುವ ಮತ್ತು ಜನಕಲ್ಯಾಣವಾಗುವ ಯಾವುದೇ ಯೋಜನೆ, ಮತ್ತು ಕಾರ್ಯಕ್ರಮಗಳಿದ್ದರೂ ಅದನ್ನು ಕ್ಷೇತ್ರದ ವತಿಯಿಂದ ಅನುಷ್ಠಾನಿಸುತ್ತೇವೆ. ಭಕ್ತರ ಪ್ರಾರ್ಥನೆ ಮಾತ್ರ ನಮಗೆ ಸಾಕು ಎಂದರು. ಟೀಕೆಗಳು ಅನೇಕ ಬಂದವು ಅದೇ ರೀತಿ ಪದ್ಮವಿಭೂಷಣ ಪ್ರಶಸ್ತಿ ಕೂಡಾ ಈ ಅವಧಿಯಲ್ಲಿ ಬಂದಿದೆ ಎಂದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಲಕ್ಷದೀಪೋತ್ಸವದೊಂದಿಗೆ ನಮ್ಮೊಳಗಿನ ಸಾತ್ವಿಕ ಶಕ್ತಿ ಜಾಗೃತವಾಗಿದೆ ಎಂದರು. ಮಾಣಿಲ ಶ್ರೀ ಧಾಮದ ಯತಿಗಳಾದ ಮೋಹನದಾಸ ಸ್ವಾಮೀಜಿ, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್, ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅಡಳಿತ ಮುಕ್ತೇಸರ ಶರತ್ಕೃಷ್ಣ ಪಡುವೆಟ್ನಾಯ ಉಪಸ್ಥಿತರಿದ್ದರು. ಹೇಮಾವತಿ ಹೆಗ್ಗಡೆಯವರು, ಡಿಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು. ಮೋಹನ್ ಕುಮಾರ್ ಪ್ರಸ್ತಾವನೆಗೈದು ಸ್ವಾಗತಿಸಿದರು.
ಧರ್ಮಸ್ಥಳ ಗ್ರಾ.ಪಂ ಉಪಾಧ್ಯಕ್ಷ ಶ್ರೀನಿವಾಸ ರಾವ್ ಕಾರ್ಯಕ್ರಮ ನಿರೂಪಿಸಿದರು. ಗ್ರಾ.ಯೋ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ವಂದನಾರ್ಪಣೆಗೈದರು.
ಪಾದಯಾತ್ರೆಯಲ್ಲಿ ಹಲವಾರು ಟ್ಯಾಬ್ಲೋ, ಭಜನೆ ತಂಡಗಳು ಭಾಗವಹಿಸಿದ್ದವು. ವಿಪತ್ತು ನಿರ್ವಹಣೆ ತಂಡ, ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡ ಹಾಗೂ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರ ಜತೆಗೆ ಭಕ್ತರು ಭಾಗವಹಿಸಿದ್ದರು.