ತೊಕ್ಕೊಟ್ಟಿನಲ್ಲಿ ಅಬ್ಬಕ್ಕ ಭವನ ಕಾಮಗಾರಿ ಪ್ರಾರಂಭಿಸಲು ಮನವಿ
ಮಂಗಳೂರು, ಡಿ.1: ತೊಕ್ಕೊಟ್ಟಿನ ಹೊಸ ಬಸ್ಸ್ಟಾಂಡ್ ಹತ್ತಿರವಿರುವ 41 ಸೆಂಟ್ಸ್ ಜಾಗದಲ್ಲಿ ಅಬ್ಬಕ್ಕ ಭವನ ನಿರ್ಮಿಸಲು ಶಂಕುಸ್ಥಾಪನೆ ಮಾಡಿ 10 ವರ್ಷಗಳು ಕಳೆದರೂ ಕೂಡ ಇನ್ನೂ ಅಬ್ಬಕ್ಕ ಭವನ ನಿರ್ಮಾಣವಾಗಿಲ್ಲ. ಈ ಬಗ್ಗೆ ಹಲವು ಬಾರಿ ರಾಜ್ಯದ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರಿಗೆ ಹಾಗೂ ಜಿಲ್ಲೆಯ ಎಲ್ಲಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೂ ಪ್ರಯೋಜನವಾಗಿಲ್ಲ. ಇನ್ನಾದರೂ ಕಾಮಗಾರಿ ಆರಂಭಿಸಬೇಕು ಎಂದು ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಬುಧವಾರ ಮತ್ತೆ ದ.ಕ.ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ. ಒಂದು ತಿಂಗಳೊಳಗೆ ಕಾಮಗಾರಿ ಪ್ರಾರಂಭಿಸದಿದ್ದರೆ ಪ್ರತಿಭಟನೆ ಮಾಡುವುದಾಗಿ ಸಮಿತಿ ಎಚ್ಚರಿಸಿದೆ.
ಪ್ರತಿ ವರ್ಷ ಅಬ್ಬಕ್ಕ ಭವನಕ್ಕಾಗಿ ಶಂಕುಸ್ಥಾಪನೆಗೈದ ಸ್ಥಳದಲ್ಲಿ, ಉಳ್ಳಾಲ ನಗರಸಭೆ ಹಾಗೂ ಜಿಲ್ಲಾಧಿಕಾರಿಯ ಕಚೇರಿ ಮುಂದೆ ಧರಣಿ ನಡೆಸಲಾಗಿದೆ. ಆದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ವಿಳಂಬಕ್ಕೆ ಅಧಿಕಾರಿಗಳೇ ಹೊಣೆಯಾಗಿದೆ ಎಂದು ಸಮಿತಿ ಆರೋಪಿಸಿದೆ.
ಈ ಸಂದರ್ಭ ಸಮಿತಿಯ ಸ್ವಾಗತಾಧ್ಯಕ್ಷ ಕೆ ಜಯರಾಮ ಶೆಟ್ಟಿ, ಅಧ್ಯಕ್ಷ ದಿನಕರ ಉಳ್ಳಾಲ್, ಗೌರವ ಉಪಾಧ್ಯಕ್ಷ ಸದಾನಂದ ಬಂಗೇರ, ಕೋಶಾಧಿಕಾರಿ ಆನಂದ ಕೆ.ಅಸೈಗೋಳಿ, ಉಪಾಧ್ಯಕ್ಷ ಯು.ಪಿ.ಆಲಿಯಬ್ಬ, ಪದಾಧಿಕಾರಿಗಳಾದ ಸತೀಶ್ ಭಂಡಾರಿ, ಶಶಿಕಲಾ ಗಟ್ಟಿ, ಶಶಿಕಾಂತಿ ಉಳ್ಳಾಲ್, ಸುಷ್ಮಾ ಜನಾರ್ದನ್, ಉಳ್ಳಾಲ ನಗರಸಭಾ ಸಸ್ಯೆ ಗೀತಾ ಭಾ ಉಪಸ್ಥಿತರಿದ್ದರು.