ಸಿಡಿಲಿಗೆ ಜಾನುವಾರು ಮೃತ್ಯು : ಗಾಳಿಮಳೆಗೆ ಹಲವು ಮನೆಗಳಿಗೆ ಹಾನಿ
ಉಡುಪಿ, ಡಿ.2: ಉಡುಪಿ ಜಿಲ್ಲೆಯಾದ್ಯಂತ ಬುಧವಾರ ರಾತ್ರಿ ಹಲವು ಕಡೆ ಗುಡುಗು ಸಹಿತ ಗಾಳಿ ಮಳೆಯಾಗಿದ್ದು, ಸಿಡಿಲು ಬಡಿದು ಜಾನುವಾರು ಮೃತಪಟ್ಟು, ಮಳೆಗೆ ಹಲವು ಮನೆಗಳು ಹಾನಿಯಾಗಿವೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಉಡುಪಿ- 12.2ಮಿ.ಮೀ., ಬ್ರಹ್ಮಾವರ- 1.7ಮಿ.ಮೀ., ಕಾಪು- 4.4ಮಿ.ಮೀ., ಕುಂದಾಪುರ- 10.4ಮಿ.ಮೀ., ಬೈಂದೂರು- 7.8ಮಿ.ಮೀ. ಮಳೆಯಾಗಿದ್ದು, ಜಿಲ್ಲೆಯಲ್ಲಿ ಸರಾಸರಿ 7.3ಮಿ. ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಕುಂದಾಪುರ ತಾಲೂಕಿನ ಉಳ್ಳೂರು ಗ್ರಾಮದ ಪಾರ್ವತಿ ಎಂಬವರ ಮನೆ ಸಮೀಪದ ಸಿಡಿಲು ಬಡಿದಿದ್ದು, ಇದರ ಪರಿಣಾಮ ಮನೆಯ ಕೊಟ್ಟಿಗೆಯಲ್ಲಿದ್ದ ಜಾನುವಾರು ಮೃತಪಟ್ಟಿದೆ. ಇದರಿಂದ ಸುಮಾರು 40,000ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಡಿ.30ರಂದು ಉಡುಪಿ ತಾಲೂಕಿನ ಕಿದಿಯೂರು ಗ್ರಾಮದ ಶಿವಾನಂದ ಹಾಗೂ ಶಾರದ ಖಾರ್ವಿ ಎಂಬವರ ಮನೆ ಗಾಳಿಮಳೆ ಯಿಂದ ಭಾಗಶಃ ಹಾನಿಯಾಗಿ ಒಟ್ಟು 50ಸಾವಿರ ರೂ. ನಷ್ಟ ಉಂಟಾಗಿದೆ. ಪೆರ್ಡೂರು ಗ್ರಾಮದ ಸುಬ್ಬಣ್ಣ ಶೆಟ್ಟಿ ಎಂಬವರ ಮನೆಯ ಮೇಲೆ ಮರಬಿದ್ದು ಭಾಗಶಃ ಹಾನಿಯಾಗಿ 40,000ರೂ. ನಷ್ಟ ಸಂಭವಿಸಿದೆ.
ಬ್ರಹ್ಮಾವರ ತಾಲೂಕಿನ 38 ಕಳ್ತೂರು ಗ್ರಾಮದಲ್ಲಿ ಗಾಳಿಮಳೆಗೆ ಅಮ್ಮಣಿ ಪೂಜಾರ್ತಿ, ಶ್ರೀನಿವಾಸ ನಾಯ್ಕ, ಸುಧಾಕರ, ಗುಲಾಬಿ ಬಾಯಿ, ಸದಿಯ ಕುಲಾಲ್ ಹಾಗೂ ಸಾಕು ಕುಲಾಲ್ತಿ ಎಂಬವರ ಮನೆಗಳು ಹಾನಿಯಾಗಿ ಒಟ್ಟು 95,000ರೂ. ನಷ್ಟ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ.