ಬ್ರಹ್ಮಾವರ: ಬೇಡಿಕೆ ಈಡೇರಿಕೆಗೆ ಕಟ್ಟಡ ಕಾರ್ಮಿಕರಿಂದ ಪ್ರತಿಭಟನೆ
ಬ್ರಹ್ಮಾವರ, ಡಿ.3: ಬ್ರಹ್ಮಾವರ ಪ್ರದೇಶ ಕಟ್ಟಡ ಕಾರ್ಮಿಕ ಸಂಘದ ವತಿಯಿಂದ ಕಟ್ಟಡ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಇಲ್ಲಿನ ತಹಶೀಲ್ದಾರರ ಕಚೇರಿಯ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ದೇಶಾದ್ಯಂತ ಕಾನೂನುಬದ್ಧವಾಗಿ ರಚನೆಗೊಂಡಿರುವ ಕಲ್ಯಾಣ ಮಂಡಳಿ ಯನ್ನು ರದ್ದುಗೊಳಿಸದೇ ಅದನ್ನು ಇನ್ನಷ್ಟು ಬಲಪಡಿಸ ಬೇಕು. ಕೃಷಿ ಕ್ಷೇತ್ರದ ಬಳಿಕ ಅತಿ ಹೆಚ್ಚು ಉದ್ಯೋಗ ಕಲ್ಪಿಸುವ ಕಟ್ಟಡ ನಿರ್ಮಾಣ ಉದ್ಯಮವನ್ನು ರಕ್ಷಿಸಬೇಕು. ಬಡ ವಿದ್ಯಾರ್ಥಿಗಳಿಂದ ಸ್ಕಾಲರ್ಶಿಪ್ ಅರ್ಜಿಗಳನ್ನು ಕೂಡಲೇ ಸ್ವೀಕರಿಸಬೇಕು, ಬಾಕಿ ಇರುವ ಸವಲತ್ತುಗಳನ್ನು ಕೂಡಲೇ ನೀಡಬೇಕು, ಅಂತರ ರಾಜ್ಯ ವಲಸೆ ಕಾರ್ಮಿಕರ ಕಾನೂನು 1979ನ್ನು ಪರಿಣಾಮಕಾರಿಯಾಗಿ ಜಾರಿ ಗೊಳಿಸಬೇಕು ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರಧಾನ ಮಂತ್ರಿ ಮತ್ತು ರಾಜ್ಯ ಕಲ್ಯಾಣ ಮಂಡಳಿ ಕಾರ್ಯದರ್ಶಿಯವರಿಗೆ ತಹಶೀಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು.
ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಉಪಾಧ್ಯಕ್ಷ ಸುಭಾಸ್ ನಾಯಕ್, ಶಶಿಧರ ಗೊಲ್ಲ, ರಾಮ ಕಾರ್ಕಡ, ಉದಯ ಪೂಜಾರಿ, ಚಂದ್ರ ನಾಯಕ್, ಮುಖಂಡ ರಾದ ಶ್ರೀನಿವಾಸ ಶೆಟ್ಟಿಗಾರ್, ಶ್ರೀಧರ ಶೆಟ್ಟಿ, ಮುರಳಿ, ವಿಜಯ ನಾಯಿರಿ, ಗೋಪಾಲ ನಾಯಕ್ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.