'ವಾರ್ತಾಭಾರತಿ' ಹೆಸರು ದುರುಪಯೋಗಪಡಿಸಿ ಸುಳ್ಳು ಸುದ್ದಿ ಹರಡಿದ ಪ್ರಕರಣ: ಎಫ್.ಐ.ಆರ್. ದಾಖಲು
ಮಂಗಳೂರು, ಡಿ.5: ವಾರ್ತಾಭಾರತಿ ವೆಬ್ ಸೈಟ್ (www.varthabharati.in)ನಲ್ಲಿ ಪ್ರಕಟವಾದ ಸುದ್ದಿಯೊಂದರ ಲಿಂಕ್ ಅನ್ನು ಬಳಸಿ ವಾಟ್ಸ್ಆ್ಯಪ್ ಮೂಲಕ ಸುಳ್ಳು ಸುದ್ದಿ ವೈರಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ CEN ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ದಾಖಲಾಗಿದೆ.
ಕಿಡಿಗೇಡಿಗಳು ವಾರ್ತಾಭಾರತಿ ವೆಬ್ ಸೈಟ್ ನಲ್ಲಿ ಪ್ರಕಟವಾದ ಕೃಷಿ ಕಾಯ್ದೆ ವಾಪಸ್ ಕುರಿತ ಸುದ್ದಿಯ ಲಿಂಕ್ ಅನ್ನು "►► Breaking News ಪೌರತ್ವ ಕಾಯ್ದೆ CAA ವಾಪಸ್ : ಪ್ರಧಾನಿ ಘೋಷಣೆ ► ಶಾಹೀನ್ ಬಾಗ್ ಮಹಿಳೆಯರ ಹೋರಾಟಕ್ಕೆ ಮಣಿದ ಕೇಂದ್ರ ಸರಕಾರ" ಎಂಬುದಾಗಿ ಆ ಸುದ್ದಿಗೆ ಸಂಬಂಧವೇ ಇಲ್ಲದ ಬೇರೆ ಶೀರ್ಷಿಕೆ ಹಾಕಿ ಶನಿವಾರ (04.12.2021) ಸಂಜೆ ವಾಟ್ಸ್ಆ್ಯಪ್ ಮೂಲಕ ವೈರಲ್ ಮಾಡಿರುವುದು ಗಮನಕ್ಕೆ ಬಂದಿತ್ತು.
ಈ ರೀತಿ ವಿಶ್ವಾಸಾರ್ಹ ಮಾಧ್ಯಮವೊಂದರ ಹೆಸರು ದುರುಪಯೋಗ ಮಾಡಿಕೊಂಡು ಜನರಲ್ಲಿ ಸಂಶಯ ಸೃಷ್ಟಿಸುವ ದುಷ್ಕೃತ್ಯ ಎಸಗುವವರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ CEN ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಅದರಂತೆ ಕಲಂ 66(ಸಿ), 66(ಡಿ) ಐಟಿ ಆ್ಯಕ್ಟ್ ಮತ್ತು ಕಲಂ 469 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.