ಅಪಘಾತ ಪ್ರಕರಣ: ಆರೋಪಿ ಟ್ಯಾಂಕರ್ ಚಾಲಕನಿಗೆ ಜೈಲು ಶಿಕ್ಷೆ
ಪುತ್ತೂರು: 5 ವರ್ಷದ ಹಿಂದೆ ಉಪ್ಪಿನಂಗಡಿ ಸಮೀಪದ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಹಿರ್ತಡ್ಕದಲ್ಲಿ ಎಲ್ಪಿಜಿ ಗ್ಯಾಸ್ ಟ್ಯಾಂಕರ್ ಮತ್ತು ಮಾರುತಿ ಸಿಫ್ಟ್ ನಡುವೆ ಢಿಕ್ಕಿ ಸಂಭವಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಟ್ಯಾಂಕರ್ ಚಾಲಕನಿಗೆ 1 ವರ್ಷ ಜೈಲು ಶಿಕ್ಷೆ ವಿಧಿಸಿ ಪುತ್ತೂರು ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶ ಮತ್ತು ಎಸಿಜೆಎಂ ನ್ಯಾಯಾಧೀಶ ರಮೇಶ್ ಎಂ ಅವರು ತೀರ್ಪು ನೀಡಿದ್ದಾರೆ.
2016ರ ಜೂ.20ರಂದು ಉಪ್ಪಿನಂಗಡಿ ಸಮೀಪದ ಹಿರ್ತಡ್ಕದಲ್ಲಿ ಮಾರುತಿ ಸಿಫ್ಟ್ ಮತ್ತು ಎಲ್ಪಿಜಿ ಗ್ಯಾಸ್ ಟ್ಯಾಂಕರ್ ನಡುವೆ ಡಿಕ್ಕಿ ಸಂಭವಿಸಿತ್ತು. ಢಿಕ್ಕಿಯ ರಭಸಕ್ಕೆ ಮಾರುತಿ ಸಿಫ್ಟ್ ಕಾರಿನಲ್ಲಿದ್ದ ಜಯದೇವ್ ಎಂಬವರು ಮೃತಪಟ್ಟಿದ್ದರು. ಅವರ ಪುತ್ರಿ ಅನ್ವಿತಾ ಗಂಭೀರ ಗಾಯಗೊಂಡಿದ್ದು, ಪತ್ನಿ ಸುಧಾ ಜಯದೇವ್ ಕೂಡಾ ಗಾಯಗೊಂಡಿದ್ದರು. ಘಟನೆಗೆ ಸಂಬಂಧಿಸಿ ಪುತ್ತೂರು ಸಂಚಾರ ಪೊಲೀಸರು ಆರೋಪಿ ಟ್ಯಾಂಕರ್ ಚಾಲಕ ಸಕಲೇಶಪುರದ ಅರುಣ್ ಕುಮಾರ್ ಅವರ ವಿರುದ್ಧ ಪ್ರಕರಣ ದಾಖಲಿಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಪುತ್ತೂರು ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶ ಮತ್ತು ಎಸಿಜೆಎಂ ನ್ಯಾಯಾಧೀಶ ರಮೇಶ್ ಎಂ ಅವರು ಸೆಕ್ಷನ್ 279ಗೆ ಸಂಬಂಧಿಸಿ 3 ತಿಂಗಳು ಸಜೆ ಮತ್ತು ರೂ. 1 ಸಾವಿರ ದಂಡ, 337 ಪ್ರಕರಣಕ್ಕೆ ಸಂಬಂಧಿಸಿ 3 ತಿಂಗಳು ಸಜೆ ಮತ್ತು ರೂ. 500 ದಂಡ, ಸೆಕ್ಷನ್ 338ಗೆ ಸಂಬಂಧಿಸಿ 3 ತಿಂಗಳು ಸಜೆ ಮತ್ತು ರೂ. 1ಸಾವಿರ ದಂಡ ಮತ್ತು ಸೆಕ್ಷನ್ 304ಗೆ ಸಂಬಂಧಿಸಿ 1 ವರ್ಷ ಸಜೆ ಮತ್ತು ರೂ. 2ಸಾವಿರ ದಂಡ ಮತ್ತು ರೂ. 2ಸಾವಿರ ದಂಡ ಪಾವತಿಸಲು ತಪ್ಪಿದ್ದಲ್ಲಿ 3 ತಿಂಗಳು ಹೆಚ್ಚುವರಿ ಸಜೆ ನೀಡಿ ತೀರ್ಪು ನೀಡಿದ್ದಾರೆ. ಪ್ರಾಸಿಕ್ಯೂಷನ್ ಪರ ಸರಕಾರಿ ಸಹಾಯಕ ಅಭಿಯೋಜಕಿ ಕವಿತಾ ಅವರು ವಾದಿಸಿದರು.