ಮುಷ್ತಾಕ್ ಹೆನ್ನಾಬೈಲ್ 'ಮನಲೋಕ' ಕೃತಿ ಬಿಡುಗಡೆ
ಉಡುಪಿ : ಸಾಹಿತ್ಯ ಲೋಕದಲ್ಲಿ ದಿನದಿಂದ ದಿನಕ್ಕೆ ಓದುಗರ ಪ್ರೀತಿಗೆ ಪಾತ್ರರಾಗುತ್ತಿರುವ ವಿಶಿಷ್ಟ ಶೈಲಿಯ ಲೇಖಕ ಮುಷ್ತಾಕ್ ಹೆನ್ನಾಬೈಲರ ಭಾಷೆ, ವಿಚಾರ, ವಿವೇಕವು ಮುಂಬರುವ ದಿನಗಳಲ್ಲಿ ಕನ್ನಡದ ಸಮಸ್ತ ಓದುಗರಿಗೆ ಸದಾಕಾಲ ರೋಮಾಂಚಕ ಮೂಡಿಸುವುದು ನಿಶ್ಚಿತ. ಅವರೊಬ್ಬ ನಾನು ಕಂಡ ಅದ್ಭುತ ಅಧ್ಯಯನಶೀಲ ಪರಿಪೂರ್ಣ ಲೇಖಕ ಎಂದು ಕೋಟಾದ ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ವೇದಿಕೆಯ ಗಾಂಧಿ ವಿಚಾರ ವೇದಿಕೆ ಬ್ರಹ್ಮಾವರ ಘಟಕದ ಉದ್ಘಾಟನೆ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮುಷ್ತಾಕ್ ಹೆನ್ನಾಬೈಲ್ ಅವರ 'ಮನಲೋಕ' ಕೃತಿಯನ್ನು ಬಿಡುಗಡೆ ಮಾಡಿ ಮಂಗಳೂರಿನ ಹಿರಿಯ ಲೇಖಕಿ-ಸಂಶೋಧಕಿ ರೋಹಿಣಿ ಬಿ ಎಮ್ ಹೇಳಿದರು.
ನೂತನವಾದ ಗಾಂಧಿ ವಿಚಾರ ವೇದಿಕೆಯ ಬ್ರಹ್ಮಾವರ ಘಟಕವನ್ನು ಗಾಂಧಿ ವಿಚಾರ ವೇದಿಕೆಯ ಮಾತೃ ಸಮಿತಿಯ ಅಧ್ಯಕ್ಷ ಶ್ರೀಧರ ಭಿಡೆ ಉದ್ಘಾಟಿಸಿದರು. ಲೇಖಕ ಸೋಮಪ್ರಕಾಶ್ ಆರ್ಯ ಅವರ ಮಂಟೆಸ್ವಾಮಿ ಮಹಾಕಾವ್ಯ ಕೃತಿಯನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ. ಚಿನ್ನಪ್ಪ ಗೌಡ ಬಿಡುಗಡೆಗೊಳಿಸಿದರು.
ಉಡುಪಿ ಜಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರು ಸಭೆಯ ಅಧ್ಯಕ್ಷತೆಯನ್ನು ವಹಿಸಿದರು. ಕಾರ್ಯಕ್ರಮದಲ್ಲಿ ಸಾಹಿತ್ಯ ಪರಿಷತ್ ವತಿಯಿಂದ ಲೇಖಕರನ್ನು ಸಮ್ಮಾನಿಸಲಾಯಿತು.ಲೇಖಕ ಅರವಿಂದ ಚೊಕ್ಕಾಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಜಯೀಂದ್ರ ಹಂದೆ ವಂದಿಸಿದರು.