ಕಾಸರಗೋಡು; ಮಹಿಳೆಯನ್ನು ಕಡಿದು ಕೊಲೆ: ಆರೋಪಿ ಪತಿ ವಶಕ್ಕೆ
ಕಾಸರಗೋಡು: ಮಹಿಳೆಯೋರ್ವರನ್ನು ಆಯುಧದಿಂದ ಕಡಿದು ಕೊಲೆ ಮಾಡಲಾದ ಘಟನೆ ಬೇಡಡ್ಕ ವ್ಯಾಪ್ತಿಯ ಪೆರ್ಲಡ್ಕದಲ್ಲಿ ಸೋಮವಾರ ಬೆಳಗ್ಗೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಅವರ ಪತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪೆರ್ಲಡ್ಕ ಪೇಟೆಯ ಕ್ವಾಟರ್ಸ್ ನಲ್ಲಿ ವಾಸವಾಗಿರುವ ಉಷಾ ( 35) ಮೃತರು ಎಂದು ಗುರುತಿಸಲಾಗಿದೆ.
ಕೃತ್ಯಕ್ಕೆ ಸಂಬಂಧಿಸಿ ಉಷಾ ಅವರ ಪತಿ ಅಶೋಕ್ ಎಂಬಾತನನ್ನು ಬೇಕಲ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಕೃತ್ಯದ ಬಳಿಕ ಕ್ವಾಟರ್ಸ್ ಗೆ ಬೀಗ ಹಾಕಿ ಅಲ್ಲಿಂದ ತೆರಳಿದ್ದ ಅಶೋಕ್ ನನ್ನು ಇಂದು ಬೆಳಗ್ಗೆ ಕಾಸರಗೋಡು ರೈಲ್ವೆ ನಿಲ್ದಾಣ ಪರಿಸರದಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಅಯ್ಯಪ್ಪ ವ್ರತಧಾರಿಯಾಗಿದ್ದ ಅಶೋಕ್ ಬೆಳಗ್ಗೆ ಭಜನಾ ಮಂದಿರಕ್ಕೆ ಬಾರದ ಹಿನ್ನೆಲೆಯಲ್ಲಿ ಸ್ನೇಹಿತರು ಕ್ವಾಟರ್ಸ್ ಗೆ ತಲುಪಿದಾಗ ಕೃತ್ಯ ಬೆಳಕಿಗೆ ಬಂದಿದೆ. ಕ್ವಾಟರ್ಸ್ ಗೆ ಬೀಗ ಜಡಿದ ಸ್ಥಿತಿಯಲ್ಲಿತ್ತು. ಕಿಟಿಕಿ ಮೂಲಕ ಗಮನಿಸಿದಾಗ ಕೃತ್ಯ ಬೆಳಕಿಗೆ ಬಂದಿತ್ತು . ಬಳಿಕ ಪರಿಸರವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಮೃತದೇಹದ ಮಹಜರು ನಡೆಸಿದ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಸರಕಾರಿ ಆಸ್ಪತ್ರೆಗೆ ತೆಗೆದು ಕೊಂಡು ಹೋಗಿದ್ದಾರೆ. ಕೃತ್ಯಕ್ಕೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಅಶೋಕ್ ಕೆಲ ಸಮಯದಿಂದ ಮಾನಸಿಕ ಅಸ್ವಸ್ಥತೆ ತೋರಿಸುತ್ತಿದ್ದ ಎಂದು ಪರಿಸರವಾಸಿಗಳು ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.