ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಮೀನುಗಾರ ಸಹಕಾರಿ ಸಂಘದ ಮಹಾಸಭೆ
ಮಂಗಳೂರು, ಡಿ.7: ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಮಹಾಸಭೆಯು ಮುಸ್ಲಿಂ ಸೆಂಟ್ರಲ್ ಕಮಿಟಿಯ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ಸಹಕಾರಿ ಸಂಘದ ವತಿಯಿಂದ ಕಿಡ್ನಿ ಮತ್ತು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ನೀಡಲಾದ ಸಹಾಯಧನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಘದ ಸಲಹೆಗಾರ ಪ್ರವೀಣ್ ಕುಮಾರ್ ಶೆಟ್ಟಿ ಮೀನುಗಾರರ ಸಂಘವು ಜಾತ್ಯತೀತ ನೆಲೆಯಲ್ಲಿ ಸರ್ವ ಧರ್ಮೀಯರ ಸಂಕಷ್ಟದಲ್ಲಿ ಭಾಗಿಯಾಗುತ್ತಾ ಸಾಮಾಜಿಕ ಸೇವೆಯೊಂದಿಗೆ ನಿರಂತರ ಬೆಳವಣಿಗೆ ಕಂಡಿದೆ ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ಅಹ್ಮದ್ ಬಾವ ಬಜಾಲ್ ಮಾತನಾಡಿ, ಸಂಘ ಸದಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಮೀನುಗಾರರು, ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶಿಕ್ಷಣ, ರೋಗಿಗಳಿಗೆ ಒದಗಿಸುತ್ತಾ ಬಂದಿದೆ. ಲಾಕ್ಡೌನ್ ಸಂದರ್ಭದಲ್ಲೂ 25 ಲಕ್ಷ ರೂ. ಮೊತ್ತದ ಆಹಾರ ಸಾಮಗ್ರಿಗಳನ್ನು ವಿತರಿಸುವ ಮೂಲಕ ಸಾಮಾಜಿಕ ಬದ್ದತೆ ಪ್ರದರ್ಶಿಸಿದೆ ಎಂದರು.
ಸಂಘದ ಅಧ್ಯಕ್ಷ ಜೆ.ಮಹಮ್ಮದ್ ಇಸಾಕ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಬ್ದುಲ್ ಲತೀಫ್, ನಿರ್ದೇಶಕ ಯು.ಟಿ.ಅಹ್ಮದ್ ಶರೀಫ್, ಬಿ. ಇಬ್ರಾಹಿಂ, ಮುಹಮ್ಮದ್ ಅಶ್ರಫ್, ಎಂ.ಎ.ಗಫೂರ್, ಎಸ್.ಕೆ.ಇಸ್ಮಾಯಿಲ್, ಎಸ್.ಎಂ. ಇಬ್ರಾಹಿಂ, ಟಿ.ಎಚ್. ಹಮೀದ್, ಸೂದತ್, ಬಿ. ಮುಹಮ್ಮದ್ ಶಾಲಿ, ಎ.ಎಂ.ಕೆ.ಮುಹಮ್ಮದ್ ಇಬ್ರಾಹಿಂ, ಬಿ.ಕೆ. ರಝಿಯಾ ಉಪಸ್ಥಿತರಿದ್ದರು.
ಮಂಗಳೂರು ತಾಪಂ ಮಾಜಿ ಸದಸ್ಯ ಮಹಮ್ಮದ್ ಮುಸ್ತಫಾ ಮಲಾರ್ ಕಾರ್ಯಕ್ರಮ ನಿರೂಪಿಸಿದರು.