ಗಂಗೊಳ್ಳಿ ತೌಹೀದ್ ಮಹಿಳಾ ಕಾಲೇಜಿನಲ್ಲಿ ಅಪರಾಧ ತಡೆ, ಕಾನೂನು ಅರಿವು ಕಾರ್ಯಕ್ರಮ
ಗಂಗೊಳ್ಳಿ : ತೌಹೀದ್ ಮಹಿಳಾ ಪದವಿ ಕಾಲೇಜಿನ ಐಕ್ಯೂಎಸಿ ಘಟಕ ಹಾಗೂ ಉಡುಪಿ ಜಿಲ್ಲಾ ಪೊಲೀಸ್ ಕುಂದಾಪುರ ಉಪ ವಿಭಾಗ ಮತ್ತು ಗಂಗೊಳ್ಳಿ ಪೊಲೀಸ್ ಠಾಣೆಯ ಜಂಟಿ ಆಯೋಗದಲ್ಲಿ ಅಪರಾಧ ತಡೆ ಹಾಗೂ ಕಾನೂನು ಅರಿವು ಕಾರ್ಯಕ್ರಮವು ತೌಹೀದ್ ಸಭಾಂಗಣದಲ್ಲಿ ಬುಧವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೌಹೀದ್ ಸಂಸ್ಥೆಯ ಕೋಶಾಧಿಕಾರಿ ಅಬ್ದುಲ್ ಹಮೀದ್ ವಹಿಸಿಕೊಂಡಿದ್ದು, ಮುಖ್ಯ ಅತಿಥಿಗಳಾಗಿ ಜಮಾತುಲ್ ಮುಸ್ಲಿಮೀನ್ ಗಂಗೊಳ್ಳಿಯ ಅಧ್ಯಕ್ಷ ಪಿ.ಎಂ. ಹಸೈನಾರ್, ಕುಂದಾಪುರ ವಿಭಾಗ ಡಿ.ವೈ.ಎಸ್.ಪಿ. ಶ್ರೀಕಾಂತ್, ಗಂಗೊಳ್ಳಿ ಪೊಲೀಸ್ ಅಧೀಕ್ಷಕರಾದ ನಂಜಾ ನಾಯ್ಕ್, ಅನಿವಾಸಿ ಗಣ್ಯರಾದ ಮುನೀರ್ ಅಹ್ಮದ್ ಖಾನ್, ಇಬ್ರಾಹಿಂ ಚೌಗುಲೆ, ಮುತಾಹಿರ್ ಎಂಎಚ್ (ಟ್ರಸ್ಟಿ) ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹಸೈನಾರ್ ಇವರು ತಮ್ಮ ಭಾಷಣದಲ್ಲಿ ಗಂಗೊಳ್ಳಿಯ ಸರ್ವ ಧರ್ಮೀಯರು ಏಕ ಭಾವನೆಯಿಂದ ಇದ್ದಾರೆ. ನಮ್ಮ ಗಂಗೊಳ್ಳಿ ಪರಿಸರದಲ್ಲಿ ಯಾವುದೇ ರೀತಿಯ ಅಪರಾಧಕ್ಕೆ ಎಡೆ ಇಲ್ಲ ಎಂದರು.
ಪೊಲೀಸ್ ಅಧಿಕಾರಿಗಳಾದ ಶ್ರೀಕಾಂತ್ ಹಾಗೂ ನಂಜಾ ನಾಯ್ಕ್ ಅವರು ವಿದ್ಯಾರ್ಥಿಗಳಿಗೆ ಕಾನೂನು ಅರಿವು, ಅಪರಾಧ ತಡೆ ಹಾಗೂ ಶಿಕ್ಷೆಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿ ಅಪರಾಧಗಳಿಗೆ ಎಡೆಗೊಡದಂತೆ ತಿಳಿ ಹೇಳಿದರು.
ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಂಬಂಧಿತ ವಿಷಯಗಳ ಬಗ್ಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿ ಪೊಲೀಸ್ ಅಧಿಕಾರಿಗಳಿಂದ ಸೂಕ್ತ ಮಾಹಿತಿಯನ್ನು ಪಡೆದರು.
ಅಧ್ಯಕ್ಷೀಯ ಭಾಷಣದಲ್ಲಿ ಅಬ್ದುಲ್ ಹಮೀದ್ ಅವರು ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಪಡೆದ ಮಾಹಿತಿಗಳನ್ನು ಮನದಟ್ಟು ಮಾಡಿಕೊಂಡು ಅದರ ಪ್ರಕಾರ ನಡೆಯುವಂತೆ ಕರೆಕೊಟ್ಟರು.
ಸಂಸ್ಥೆಯ ವಿಶ್ವಸ್ಥ ಮಂಡಳಿಯ ಸದಸ್ಯರು, ಆಡಳಿತಾಧಿಕಾರಿ, ಕಾರ್ಯನಿರ್ವಾಹಕ ನಿರ್ದೇಶಕರು, ಪ್ರಾoಶುಪಾಲರು, ಮುಖ್ಯೋಪಾಧ್ಯಾಯರು, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿಗಳೊಡಗೂಡಿ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಕಾಲೇಜಿನ ವಿದ್ಯಾರ್ಥಿನಿ ಖವ್ಲಾ ಖಾಝಿ ನಿರೂಪಿಸಿ, ಅಸ್ಮಿಯ ವಂದಿಸಿದರು. ಸಫಾ ಸಯೀದ್ ಗಣ್ಯರನ್ನು ಪರಿಚಯಿಸಿದರು. ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.