ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ನಮನ ಕಾರ್ಯಕ್ರಮ
ಮಂಗಳೂರು, ಡಿ.29: ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ಲೋಕಹಿತಕ್ಕಾಗಿ ಜೀವನ ಪರ್ಯಂತ ದುಡಿದವರು. ಅವರ ಪ್ರೇರಣೆಯೇ ಸಮಾಜ ಕಾರ್ಯಕ್ಕೆ ದಾರಿದೀಪವಾಗಿದೆ ಎಂದು ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ನಗರದ ಕದ್ರಿ ಮಂಜು ಪ್ರಸಾದ ಸಭಾಂಗಣದಲ್ಲಿ ಬುಧವಾರ ಪೇಜಾವರ ವಿಶ್ವೇಶತೀರ್ಥ ನಮನ, ಗುರುವಂದನೆ ಮತ್ತು 20 ಮಂದಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ತಪಸ್ವಿಗಳು ಬಹಳ ಕಷ್ಟದ ಜೀವನ ನಡೆಸುತ್ತಾರೆ. ಅವರಿಗೆ ಲೋಕ ಹಿತವೇ ಪರಮ ಧ್ಯೇಯವಾಗಿರುತ್ತದೆ. ಅಂತಹ ಸಾಧಕರಲ್ಲಿ ವಿಶ್ವೇಶತೀರ್ಥರು ಅಗ್ರಸಾಲಿನಲ್ಲಿ ನಿಲ್ಲುತ್ತಾರೆ. ಎಳವೆಯಲ್ಲೇ ಸನ್ಯಾನ ಸ್ವೀಕರಿಸಿ, ಇಡೀ ಜೀವನವನ್ನು ಸಮಾಜಸೇವೆಗೆ ಅವರು ಮುಡಿಪಾಗಿಟ್ಟಿದ್ದರು ಎಂದು ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸ್ಮರಿಸಿದರು.
ಈ ಸಂದರ್ಭ ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಒಡಿಯೂರಿನ ಗುರುದೇವಾನಂದ ಸ್ವಾಮೀಜಿ ಹಾಗೂ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಲಕ್ಷ್ಮಿನಾರಾಯಣ ಆಸ್ರಣ್ಣ ಆಶೀರ್ವಚನ ನೀಡಿದರು.
ಶಾಸಕ ವೇದವ್ಯಾಸ ಕಾಮತ್ ಕಾರ್ಯಕ್ರಮ ಉದ್ಘಾಟಿಸಿದರು. ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಎಂ.ಬಿ. ಪುರಾಣಿಕ್ ಉಪಸ್ಥಿತರಿದ್ದರು. ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ ಸ್ವಾಗತಿಸಿದರು. ದಯಾನಂದ ಕಟೀಲ್ ವಂದಿಸಿದರು. ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಈ ವೇಳೆ ಕನಕಗಿರಿ ಹುಸೇನ್ ಸಾಬ್ ತಂಡದಿಂದ ಹರಿ ಕೀರ್ತನಾ ಸಂಧ್ಯಾ ಕಾರ್ಯಕ್ರಮ ನಡೆಯಿತು.