ಉದ್ಯೋಗ ಖಾತರಿ ರೈತರಿಗೆ ವರದಾನ: ಅಮಿತ್
ಬ್ರಹ್ಮಾವರ, ಡಿ.31: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಗ್ರಾಮೀಣ ಪ್ರದೇಶಕ್ಕೆ ವರದಾನ ವಾಗಿದ್ದು ರೈತರು ಈ ಯೋಜನೆಯಡಿ ವೈಯಕ್ತಿಕ ಸೌಲಭ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆದು ಕೊಳ್ಳಬೇಕು ಎಂದು ಬ್ರಹ್ಮಾವರ ಸಹಾಯಕ ತೋಟಗಾರಿಕಾ ಅಧಿಕಾರಿ ಅಮಿತ್ ತಿಳಿಸಿದ್ದಾರೆ.
ಕಾಡೂರು ಗ್ರಾಪಂನಲ್ಲಿ ಜರಗಿದ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆ ಹಾಗೂ ರೋಜ್ಗಾರ್ ದಿವಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಅಡಿಕೆ ತೋಟದ ನಿರ್ಮಾಣ, ತೆಂಗು ಹಾಗೂ ಗೇರು ಕೃಷಿ ಮತ್ತು ಮಲ್ಲಿಗೆ ಕೃಷಿಯ ಸೌಲಭ್ಯವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ರೈತರು ಮುಂದಾಗಬೇಕು ಎಂದು ಅವರು ತಿಳಿಸಿದರು.
ಬ್ರಹ್ಮಾವರ ತಾಪಂ ಸಾಮಾಜಿಕ ಪರಿಶೋಧನಾ ಸಂಯೋಜಕ ಹುಸೇನ್ ಸಾಬ್ ಮಾತನಾಡಿ, ಕಾಮಗಾರಿ ಅನುಷ್ಠಾನದಲ್ಲಿ ಗುಣಮಟ್ಟವನ್ನು ಕಾಪಾಡಿ ಕೊಳ್ಳುವುದು ಹಾಗೂ ಕಡತಗಳ ಸಮರ್ಪಕ ನಿರ್ವಹಣೆ ಕೂಡ ಅನಿವಾರ್ಯ ಎಂದು ಹೇಳಿದರು.
ಪಂಚಾಯತ್ ಅಧ್ಯಕ್ಷ ಪಾಂಡುರಂಗ ಶೆಟ್ಟಿ, ಉಪಾಧ್ಯಕ್ಷೆ ಅಮಿತಾ ರಾಜೇಶ್ ಮಾತನಾಡಿದರು. ಗ್ರಾಪಂ ಸದಸ್ಯರುಗಳಾದ ರಘುರಾಮ ಶೆಟ್ಟಿ, ವಿಜಯ ಮರಕಾಲ, ಗುಲಾಬಿ, ವೀಣಾ, ಅಮ್ಮಣಿ ಸತೀಶ್ ಕುಲಾಲ್, ಜಲಂಧರ್ ಶೆಟ್ಟಿ, ಪ್ರಭಾವತಿ, ಗಿರಿಜಾ, ಗಿರೀಶ್ ರಾವ್ ಮೊದಲಾದವರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಕೆ. ಕಾರ್ಯಕ್ರಮ ನಿರ್ವಹಿಸಿ ದರು.