ಕಾಪು ಪುರಸಭೆ; ಸಮಸ್ಯೆಗಳ ಪರಿಹಾರಕ್ಕೆ ವಿಶೇಷ ಪ್ರಯತ್ನ: ಲಾಲಾಜಿ ಮೆಂಡನ್
ಕಾಪು : ಪುರಸಭೆಯ ಕಾರಣದಿಂದ ಕೈ ತಪ್ಪಿ ಹೋಗಿರುವ ಗ್ರಾಮೀಣ ಕೃಪಾಂಕ, ಪ್ರಾಧಿಕಾರ ಸಮಸ್ಯೆ, ಸಿಂಗಲ್ ಲೇಔಟ್, ಸಿ.ಆರ್.ಝಡ್ ಸಹಿತ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ವಿಶೇಷವಾಗಿ ಪ್ರಯತ್ನಿಸಲಾಗುವುದು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು.
ಕಾಪುವಿನಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರಿಗೆ ತೊಂದರೆಯೊಡ್ಡುತ್ತಿರುವ ವಿವಿಧ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತಂದು, ಜನ ವಿರೋಧಿ ಕಾಯ್ದೆಗಳ ಸರಳೀಕರಣಕ್ಕೂ ಒತ್ತಡ ಹೇರಲಾಗುವುದು. ಕಾಪು ಪುರಸಭೆಯಲ್ಲಿ ಗೆಲುವು ಸುಲಭವಿರಲಿಲ್ಲ. ಆದರೂ ಎಲ್ಲರೂ ಜೊತೆ ಸೇರಿ ಪ್ರಯತ್ನಿಸಿದ ಪರಿಣಾಮ ಗೆಲುವು ಸಾಧಿಸಿದ್ದೇವೆ. ಇದನ್ನೇ ಮುಂದಿನ ಚುನಾವಣೆಯಲ್ಲೂ ಮುಂದುವರಿಸುತ್ತೇವೆ ಎಂದರು.
ತಮ್ಮ ತಪ್ಪನ್ನೇ ಒಪ್ಪಿಕೊಳ್ಳಿ: ಕಾಪು ಪುರಸಭೆ ಅಭಿವೃದ್ಧಿಗೆ 150 ಕೋಟಿ ರೂಪಾಯಿ ಅನುದಾನ ತಂದಿದ್ದೇನೆ ಎಂದು ಸುಳ್ಳು ಹೇಳುತ್ತಾ ಬಂದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರಿಗೆ ಮತದಾರರೇ ಉತ್ತರ ನೀಡಿದ್ದಾರೆ. ಚುನಾವಣೆಯಲ್ಲಿ ಸೋಲು ಗೆಲುವು ಸಹಜವೇ ಆಗಿದ್ದು, ಸೋತ ನಂತರ ತಮ್ಮ ಸೋಲಿಗೆ ಬೇರೆಯವರು ಕಾರಣ ಎಂದು ಆರೋಪಿಸುವ ಬದಲು ಮತದಾರರು ನೀಡಿರುವ ತೀರ್ಪನ್ನು ಸ್ವೀಕರಿಸಿ, ತಮ್ಮ ತಪ್ಪನ್ನು ಒಪ್ಪಿಕೊಳ್ಳುವ ಮನಸ್ಥಿತಿಗೆ ಕಾಂಗ್ರೆಸ್ ಒಗ್ಗಿಕೊಳ್ಳಲಿ ಎಂದು ಹೇಳಿದರು.
ನವ ಕಾಪು ನಿರ್ಮಾಣದ ಸಂಕಲ್ಪ: ಕಾಪು ಪುರಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬಂದಿದ್ದು ಮುಂದಿನ ಐದು ವರ್ಷಗಳಲ್ಲಿ ನವ ಕಾಪು ನಿರ್ಮಾಣದ ಸಂಕಲ್ಪದೊಂದಿಗೆ ಪುರಸಭೆಯಲ್ಲಿ ಸ್ವಚ್ಚ ಮತ್ತು ಸುಂದರ ಆಡಳಿತ ನೀಡಲಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.
ಪುರಸಭೆಯ ಚುನಾವಣೆಯಲ್ಲಿ ಬಿಜೆಪಿಗೆ ಉತ್ತಮ ಫಲಿತಾಂಶ ನೀಡಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಅವರು ಪಕ್ಷದ ಗೆಲುವಿನಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಶ್ರಮವಿದೆ. ಕೇಂದ್ರ ಮತ್ತು ರಾಜ್ಯ ಸಚಿವರು, ಶಾಸಕರು ಮತ್ತು ಎಲ್ಲಾ ಜನಪ್ರತಿನಿಧಿಗಳ ಒಗ್ಗಟ್ಟಿನ ಪ್ರಯತ್ನ ಕಾರಣವಾಗಿದೆ ಎಂದರು.
ಕಾಂಗ್ರೆಸ್ ಮುಖಂಡರ ಅಪಪ್ರಚಾರ, ಜಾತಿ ರಾಜಕೀಯದ ದಾಳ, ಮತ ವಿಭಜನೆಯ ಯತ್ನ ಮತ್ತು ಅಭಿವೃದ್ಧಿ ಬಗೆಗಿನ ಸುಳ್ಳು ಆಪಾದನೆಗಳ ನಡುವೆಯೂ ಬಿಜೆಪಿ ಉತ್ತಮ ಸಾಧನೆ ಮಾಡಿದೆ. ದೇಶದಲ್ಲಿ ಕಾಂಗ್ರೆಸ್ ನಿರ್ನಾಮವಾಗಿದ್ದು, ಕರಾವಳಿಯಲ್ಲೂ ಅದೇ ಪರಿಸ್ಥಿತಿ ಎದುರಾಗಲಿದೆ. ಕಾಪು ಪುರಸಭೆ ವ್ಯಾಪ್ತಿಯ ಕುಡಿಯುವ ನೀರಿನ ಸಮಸ್ಯೆ, ಒಳಚರಂಡಿ ಯೋಜನೆ, ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಸಹಿತವಾಗಿ ಪ್ರಣಾಳಿಕೆಯಲ್ಲಿ ತಿಳಿಸಿರುವ ಎಲ್ಲಾ ಭರವಸೆಗಳನ್ನು ಹಂತ ಹಂತವಾಗಿ ಈಡೇರಿಸುತ್ತೇವೆ ಎಂದರು.
ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಸುರೇಶ್ ಪಿ. ಶೆಟ್ಟಿ ಗುರ್ಮೆ, ಚುನಾವಣಾ ಸಹ ಪ್ರಭಾರಿ ಕಿರಣ್ ಕೊಡ್ಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಪಕ್ಷದ ಮುಖಂಡರಾದ ಶಿಲ್ಪಾ ಜಿ. ಸುವರ್ಣ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಗಂಗಾಧರ ಸುವರ್ಣ, ಗೋಪಾಲಕೃಷ್ಣ ರಾವ್, ಸಂದೀಪ್ ಶೆಟ್ಟಿ, ಸುಧಾಮ ಶೆಟ್ಟಿ, ಪ್ರವೀಣ್ ಗುರ್ಮೆ, ನವೀನ್ ಎಸ್.ಕೆ. ಮೊದಲಾದವರು ಉಪಸ್ಥಿತರಿದ್ದರು.