ಜ. 8ರಂದು ಕೊರಗರ ಮೇಲಿನ ದೌರ್ಜನ್ಯ ಖಂಡಿಸಿ ದಸಂಸ ಪ್ರತಿಭಟನೆ
ಉಡುಪಿ, ಜ.5: ಕೋಟತಟ್ಟು ಕೊರಗರ ಮೇಲಿನ ಪೊಲೀಸ್ ದೌರ್ಜನ್ಯ ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಶಾಖೆ ನೇತೃತ್ವದಲ್ಲಿ ಜ.8ರಂದು ಮಧ್ಯಾಹ್ನ 3ಗಂಟೆಗೆ ಉಡುಪಿ ಎಸ್ಪಿ ಕಚೇರಿ ಎದುರು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ದಸಂಸ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಶಾಖೆಯ ತುರ್ತು ಸಭೆಯಲ್ಲಿ ಈ ಬಗ್ಗೆ ನಿರ್ಣಯಿಸಲಾಯಿತು. ಪೊಲೀಸ್ ದೌರ್ಜನ್ಯ ವನ್ನು ಒಕ್ಕೋರಲಿನಿಂದ ಖಂಡಿಸಲಾಯಿತು. ಕೋಟ ಠಾಣಾಧಿಕಾರಿಯೊಬ್ಬರನ್ನೇ ಅಮಾನತು ಮಾಡಿದ್ದನ್ನು ಸಭೆಯಲ್ಲಿ ವಿರೋಧಿಸಲಾಯಿತು ಲಾಠಿಚಾರ್ಜ್ ಮಾಡಿದ ಉಳಿದ 6 ಸಿಬ್ಬಂದಿಗಳನ್ನು ಕೂಡಲೇ ಕೂಡಲೇ ಅಮಾನತು ಮಾಡ ಬೇಕೆಂದು ಒತ್ತಾಯಿಸಲಾಯಿತು.
ಸಭೆಯಲ್ಲಿ ವಿಧಾನಸೌಧ ಚಲೋ ಹಕ್ಕೋತ್ತಾಯ ಚಳುವಳಿಯ ಆಗುಹೋಗು ಗಳ ಬಗ್ಗೆ ಚರ್ಚಿಸಲಾಯಿತು. ಚಳುವಳಿ ಯಶಸ್ವಿಗೊಳಿಸಿದ್ಧಕ್ಕೆ ಎಲ್ಲಾ ತಾಲೂಕಿನ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಲಾಯಿತು. ಖರ್ಚು ವೆಚ್ಚಗಳ ಅನುಮೋದನೆ ಪಡೆಯಲಾಯಿತು.
ಸಭೆಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ, ಪರಮೇಶ್ವರ ಉಪ್ಪೂರು, ಅಣ್ಣಪ್ಪ ನಕ್ರೆ, ಶ್ರೀಧರ ಕುಂಜಿಬೆಟ್ಟು, ಶ್ಯಾಮ ಸುಂದರ ತೆಕ್ಕಟ್ಟೆ, ಭಾಸ್ಕರ್ ಮಾಸ್ಟರ್ ಕುಂಜಿಬೆಟ್ಟು, ತಾಲೂಕು ಸಂಚಾಲಕರಾದ ಶಂಕರ್ ದಾಸ್ ಚೆಂಡ್ಕಳ, ವಡ್ಡರ್ಸೆ ಶ್ರೀನಿವಾಸ, ವಿಠಲ ಉಚ್ಚಿಲ, ನಾಗರಾಜ ಕುಂದಾಪುರ ಮತ್ತು ಶಿವರಾಮ್ ಕಾಪು, ಶ್ರೀಪತಿ, ಕರುಣಾಕರ, ಶಿವಾನಂದ ಮೂಡುಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.