ಕೆಎಂಸಿ ಪ್ರಾಧ್ಯಾಪಕರಿಗೆ ಐಸಿಎಂಆರ್ ರಾಷ್ಟ್ರೀಯ ಪ್ರಶಸ್ತಿ
ಡಾ ಸತೀಶ್ ಅಡಿಗ
ಮಣಿಪಾಲ, ಜ.7: ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಭ್ರೂಣಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ ಸತೀಶ್ ಅಡಿಗ ಅವರನ್ನು 2020 ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿಗೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಆಯ್ಕೆ ಮಾಡಿದೆ.
ಐಸಿಎಂಆರ್ ತನ್ನ ವೆಬ್ಸೈಟ್ನಲ್ಲಿ ನೀಡಿದ ಮಾಹಿತಿಯಂತೆ ಪ್ರೊ. ಅಡಿಗ ಅವರು ಇನ್ ವಿಟ್ರೊ ಫರ್ಟಿಲೈಸೇಶನ್ (ಐವಿಎಫ್)ಕ್ಷೇತ್ರಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಐಸಿಎಂಆರ್ನಿಂದ ಡಾ.ಸುಭಾಸ್ ಮುಖಜಿರ್ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.
ಡಾ.ಸುಭಾಸ್ ಮುಖರ್ಜಿ ಅವರು ಭಾರತದ ಮೊದಲ ಐವಿಎಫ್ ಮಗು ವಿನ ಸೃಷ್ಟಿಕರ್ತರು. ಐಸಿಎಂಆರ್ ದೇಶದಲ್ಲಿ ಐವಿಎಫ್ ತಜ್ಞರ ಅತ್ಯುತ್ತಮ ಕೊಡುಗೆಯನ್ನು ಗುರುತಿಸಲು ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಿದೆ. ಡಾ ಅಡಿಗ ಅವರು ಕೆಎಂಸಿ ಮಣಿಪಾಲದಲ್ಲಿ ಸಹಕರಿತ ಸಂತಾನೋತ್ಪತ್ತಿ ಚಿಕಿತ್ಸೆ ಕಾರ್ಯಕ್ರಮದ ನೇತೃತ್ವ ವಹಿಸಿದ್ದಾರೆ ಅಲ್ಲದೇ ಕ್ಲಿನಿಕಲ್ ಐವಿಎಫ್ ಮತ್ತು ಸಂಶೋಧನೆ ಎರಡಕ್ಕೂ ಗಣನೀಯ ಕೊಡುಗೆ ನೀಡಿದ್ದಾರೆ ಎಂದು ಕೆಎಂಸಿ ಮಣಿಪಾಲದ ವೈದ್ಯಕೀಯ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.