ದ.ಕ.: ಬಲವಂತದ ಲಾಕ್ ಡೌನ್ ನಿರ್ಬಂಧಗಳಿಗೆ ಉದ್ಯಮಿಗಳು,ವ್ಯಾಪಾರಸ್ಥರ ವಿರೋಧ
ಮಂಗಳೂರು, ಜ.14: ದ.ಕ. ಜಿಲ್ಲೆಯಲ್ಲಿ ಬಲವಂತವಾಗಿ ಲಾಕ್ಡೌನ್ ಹೇರಿದ್ದರಿಂದ ವ್ಯಾಪಾರಿಗಳು, ಉದ್ಯಮಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ರೀತಿಯ ಅವೈಜ್ಞಾನಿಕ ಲಾಕ್ಡೌನ್ ನಿಯಮಗಳನ್ನು ವಿಧಿಸಬಾರದು. ಈ ಬಗ್ಗೆ ಜಿಲ್ಲಾಧಿಕಾರಿ ತಕ್ಷಣ ಸಮಾಲೋಚನೆ ನಡೆಸಬೇಕು ಎಂದು ಸಾಮಾಜಿಕ ಹೋರಾಟಗಾರ ಎಂ.ಜಿ.ಹೆಗಡೆ ಒತ್ತಾಯಿಸಿದ್ದಾರೆ.
ನಗರದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನ ಮಹಾಮಾರಿ ಈಡೀ ಜಗತ್ತನ್ನೇ ಕಾಡುತ್ತಿದೆ. ಜೊತೆಗೆ ಆರ್ಥಿಕವಾಗಿ ನಮ್ಮನ್ನು ಪ್ರಪಾತಕ್ಕೆ ತಳ್ಳುತ್ತಿದೆ. ಕೋವಿಡ್ ಇಲ್ಲವೆಂದೂ, ಜನ ಸಾಯುತ್ತಿಲ್ಲವೆಂದೂ ನಾವೇನು ಹೇಳುತ್ತಿಲ್ಲ. ಆದರೆ ಅದರ ನಿಯಂತ್ರಣ ರೀತಿ ಮತ್ತು ನೀತಿ ವಿಚಾರದಲ್ಲಿ ನಮಗೆ ವಿರೋಧವಿದೆ ಎಂದು ಹೇಳಿದರು. ಒಂದು ಆರ್ಥಿಕ ವರ್ಷದಲ್ಲಿ ಬೀಳುವ ಹೊರೆ ಹೇಗೋ ನಿಭಾಯಿಸಬಹುದು. ಆದರೆ ನಿರಂತರವಾಗಿ ಅದು ಮುಂದುವರಿದರೆ ಅದರ ಆಘಾತ ವ್ಯಾಪಾರಿಗಳಿಗೆ ತಡೆದುಕೊಳ್ಳಲು ಸಾಧ್ಯವಿಲ್ಲ. ಬಹುತೇಕರು ಮಧ್ಯಮ ಮತ್ತು ಸಣ್ಣ ವ್ಯಾಪಾರಿಗಳು, ಹೆಚ್ಚಿನವರಿಗೆ ಖಾಸಗಿ ಮತ್ತು ಬ್ಯಾಂಕ್ ಸಾಲವಿದೆ. ದುಡಿಯುವ ಸಿಬ್ಬಂದಿಗೆ ಸಂಬಳ, ವಿವಿಧ ತೆರಿಗೆ, ವಿದ್ಯುತ್ ಬಿಲ್ ಪಾವತಿ ಹೀಗೆ ಸಮಸ್ಯೆಗಳ ಸರಮಾಲೆಯೇ ನಮ್ಮೆದುರಿದೆ ಎಂದವರು ಹೇಳಿದರು.
ಪ್ರಸಕ್ತ ಕೊರೋನ ಎಷ್ಟು ವರ್ಷ ಹೀಗೆ ಇರುತ್ತದೆ ಅನ್ನುವ ಪ್ರಶ್ನೆಗೆ ಯಾರ ಬಳಿಯ ಉತ್ತರವಿಲ್ಲ. ಒಂದು ಕಡೆ ರಾಜಕೀಯ ಮರವಣಿಗೆ, ಧಾರ್ಮಿಕ ಮೆರವಣಿಗೆ, ಸರಕಾರಿ ಕಾರ್ಯಕ್ರಮ, ಚುನಾವಣೆಗಳು ನಡೆಯುತ್ತಲೇ ಇದೆ. ಆದರೆ ಸಣ್ಣ ಪುಟ್ಟ ವ್ಯಾವಾರಿಗಳ ಮೇಲೆ ಮಾತ್ರ ಕೊರೋನ ಅಸ್ತ್ರ ಬಿಟ್ಟು ಬಂದ್ ಮಾಡಿಸಲಾಗುತ್ತಿದೆ. ಇದು ಹೀಗೆ ಮುಂದುವರಿದರೆ ಅನೇಕ ಕುಟುಂಬಗಳು ಆತ್ಮಹತ್ಯೆಯ ದಾರಿ ಹಿಡಿಯುವ ಸಾಧ್ಯತೆ ಇದೆ. ಈ ಕಾರಣಕ್ಕೆ ದ.ಕ. ಜಿಲ್ಲಾಧಿಕಾರಿ ತಕ್ಷಣ ನಮ್ಮನ್ನು ಸೇರಿಸಿ, ಜನಪ್ರತಿನಿಧಿಗಳ ಸಮ್ಮುಖದಲ್ಲಿ ಸಭೆ ನಡೆಸಬೇಕು. ಕೋವಿಡ್ ನಿಯಮಾಳಿ ಜಾರಿಗೆ ತರವು ಮೊದಲು ವಿವಿಧ ವಲಯಗಳ ಮುಖಂಡರನ್ನೂ ಸೇರಿಸಿ ಸಮಿತಿ ರಚಿಸಿ ಈ ಬಗ್ಗೆ ಮುಕ್ತ ಸಂವಾದವಾಗಬೇಕು. ಅದು ಬಿಟ್ಟು ಬಲಾತ್ಕಾರದಿಂದ ಲಾಕ್ಡೌನ್ ಮಾಡುವುದನ್ನು ನಾವು ವಿರೋಧಿಸುತ್ತೇವೆ ಎಂದು ಎಂ.ಜಿ.ಹೆಗಡೆ ಸ್ಪಷ್ಟಪಡಿಸಿದರು.
ಲಾಕ್ಡೌನ್, ನಿರ್ಬಂಧ ವಿಚಾರವಾಗಿ ಜಿಲ್ಲಾಡಳಿತ ನಮ್ಮನ್ನು ಮಾತುಕತೆಗೆ ಕರೆಯದೆ ಏಕಮುಖಿ ನಿರ್ಣಯ ಮಾಡಿದರೆ, ನಾವು ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯ ವಾಗುತ್ತದೆ ಎಂದು ಕರಾವಳಿ ಟೆಕ್ಸ್ ಟೈಲ್, ಗಾರ್ಮೆಂಟ್ ಮತ್ತು ಫೂಟ್ವೇರ್ ಅಸೋಸಿಯೇಶನ್, ಜಿಲ್ಲಾ ಸವಿತಾ ಸಮಾಜ, ಜಿಲ್ಲಾ ಬ್ಯೂಟಿ ಪಾರ್ಲರ್ಗಳ ಸಂಘ, ಸೌಂಡ್ ಮತ್ತು ಲೈಟ್ ಅಸೋಸಿಯೇಶನ್, ಜಿಲ್ಲಾ ಫೋಟೋಗ್ರಾಫರ್ ಅಸೋಸಿಯೇಶನ್, ಚೆಂಬರ್ ಆಫ್ ಕಾಮರ್ಸ್ ಉಪ್ಪಿನಂಗಡಿ, ಜಿಲ್ಲಾ ಮೊಬೈಲ್ ವರ್ತಕರ ಸಂಘ, ಮತ್ತು ಶಾಮಿಯಾನ ವರ್ತಕರು, ಇತ್ಯಾದಿ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಈಗಾಗಲೇ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವುದಾಗಿ ಉದ್ಯಮಿ ಸಂತೋಷ್ ಕಾಮತ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿವಿಧ ಉದ್ಯಮ ಸಂಘಟನೆಗಳ ಪ್ರತಿನಿಧಿಗಳಾದ ಗುರುದತ್ ಕಾಮತ್, ಸಯೀದ್ ಇಸ್ಮಾಯೀಲ್, ಪ್ರವೀಣ್ ವಾಲ್ಕೆ, ಬಬತಾ ಶೆಟ್ಟಿ, ವಸಂತ ಮತ್ತಿತರರು ಉಪಸ್ಥಿತರಿದ್ದರು.