ಪಾಣೆಮಂಗಳೂರು: ಬೈಕ್, ಮೊಬೈಲ್ ಸೇತುವೆಯಲ್ಲಿಟ್ಟು ನೇತ್ರಾವತಿ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ
ಬಂಟ್ವಾಳ, ಜ.19: ಬಿ.ಸಿ.ರೋಡ್ ಸಮೀಪದ ಪಾಣೆಮಂಗಳೂರು ಸೇತುವೆಯಿಂದ ವ್ಯಕ್ತಿಯೊಬ್ಬರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ರಾತ್ರಿ ನಡೆದಿರವುದು ವರದಿಯಾಗಿದೆ.
ಕಾರಾಜೆ ನಿವಾಸಿ ಜಲೀಲ್(55) ಮೃತಪಟ್ಟ ವ್ಯಕ್ತಿ. ರಾತ್ರಿ ಸುಮಾರು 11 ಗಂಟೆಯ ವೇಳೆಗೆ ನೇತ್ರಾವತಿ ಸೇತುವೆಯಿಂದ ಹಾರಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
11 ಗಂಟೆಯ ವೇಳೆಗೆ ನೇತ್ರಾವತಿ ಸೇತುವೆಯಲ್ಲಿ ಬೈಕ್, ಚಪ್ಪಲಿ ಹಾಗೂ ಮೊಬೈಲ್ ಫೋನ್ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸಂಶಯಗೊಂಡ ಸ್ಥಳೀಯ ಈಜುಗಾರರು ನದಿಯಲ್ಲಿ ಹುಡುಕಲು ಆರಂಭಿಸಿದರು. ಸ್ಥಳದಲ್ಲಿದ್ದ ಮೊಬೈಲ್ ಬಗ್ಗೆ ಮಾಹಿತಿ ಪಡೆದು ವಿಚಾರಿಸಿದಾಗ ಕಾರಾಜೆ ನಿವಾಸಿ ಜಲೀಲ್ ಎಂದು ಗುರುತು ಪತ್ತೆಯಾಗಿತ್ತು. ತಡ ರಾತ್ರಿವರೆಗೂ ಹುಡುಕಿದಾಗ ವ್ಯಕ್ತಿಯ ಪತ್ತೆಯಾಗಿರಲಿಲ್ಲ. ಇಂದು ಮುಂಜಾನೆಯಿಂದ ಸ್ಥಳೀಯ ಈಜುಗಾರರಾದ ಸತ್ತಾರ್ ಹಾಗೂ ಮುಹಮ್ಮದ್ ಎಂಬವರು ನದಿಯಲ್ಲಿ ಈಜಾಡಿ ಹುಡುಕಿದಾಗ ಮೃತದೇಹ ಪತ್ತೆಯಾಗಿದೆ.
ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದ್ದು ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ಸ್ಪಷ್ಟವಾದ ಕಾರಣ ತಿಳಿದುಬಂದಿಲ್ಲ.