ಕಾಸರಗೋಡು : ಗಲ್ಫ್ನಿಂದ ಬಂದ ಯುವಕನನ್ನು ಅಪಹರಿಸಿ, ಕೊಲೆ
ಕಾಸರಗೋಡು : ಗಲ್ಫ್ ಉದ್ಯೋಗಿಯಾದ ಯುವಕನೋರ್ವನನ್ನು ಅಪಹರಿಸಿ ಕೊಲೆಗೈದು ಆಸ್ಪತ್ರೆಗೆ ತಲುಪಿಸಿ ತಂಡವು ಪರಾರಿಯಾದ ಘಟನೆ ಇಂದು ಸಂಜೆ ಬಂದ್ಯೋಡ್ ನಲ್ಲಿ ನಡೆದಿದೆ.
ಸೀತಾಂಗೋಳಿ ಮುಗುವಿನ ಅಬೂಬಕ್ಕರ್ ಸಿದ್ದಿಕ್ (32) ಕೊಲೆಗೀಡಾದ ಯುವಕ.
ಹಣಕಾಸಿನ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಈ ಕೃತ್ಯ ನಡೆದಿದೆ ಎಂದು ಪೋಲೀಸರಿಗೆ ಪ್ರಾಥಮಿಕ ಮಾಹಿತಿ ಲಭಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಶನಿವಾರವಷ್ಟೇ ಯುವಕ ಗಲ್ಫ್ ನಿಂದ ಊರಿಗೆ ಬಂದಿದ್ದು, ಇಂದು ಮಧ್ಯಾಹ್ನ ಪೈವಳಿಕೆ ನಿವಾಸಿ ಸೇರಿದಂತೆ ಇಬ್ಬರು ಕಾರಿನಲ್ಲಿ ಸಿದ್ದಿಕ್ ನನ್ನು ಅಪಹರಿಸಿದ್ದು , ಬಳಿಕ ರಾತ್ರಿ 9 ಗಂಟೆಯ ಸುಮಾರಿಗೆ ಬಂದ್ಯೋಡಿನ ಆಸ್ಪತ್ರೆಗೆ ವಾಹನವೊಂದರಲ್ಲಿ ತಲುಪಿಸಿದ ತಂಡವು ಕೆಲ ನಿಮಿಷದಲ್ಲೇ ಪರಾರಿಯಾಗಿದೆ ಎಂದು ತಿಳಿದುಬಂದಿದೆ.
ವೈದ್ಯರು ತಪಾಸಣೆ ನಡೆಸಿದಾಗ ಯುವಕ ಮೃತಪಟ್ಟಿರುವುದು ದೃಢಪಟ್ಟಿದೆ. ಬಳಿಕ ಆಸ್ಪತ್ರೆ ಅಧಿಕಾರಿಗಳು ಕುಂಬಳೆ ಪೊಲೀಸರಿಗೆ ಮಾಹಿತಿ ನೀಡಿದ್ದು , ಕುಂಬಳೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಹಲ್ಲೆಯಿಂದ ಯುವಕನ ದೇಹದಲ್ಲಿ ಗಾಯಗಳು ಕಂಡುಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿರಿಸಲಾಗಿದ್ದು, ದಷ್ಕರ್ಮಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.