ಬಂದ್ಯೋಡ್ | ಯುವಕನ ಕೊಲೆ ಪ್ರಕರಣ: ಮತ್ತೆ ಮೂವರು ಆರೋಪಿಗಳ ಬಂಧನ
ಬಂಧಿತ ಆರೋಪಿಗಳು
ಕಾಸರಗೋಡು : ಗಲ್ಫ್ ಉದ್ಯೋಗಿ ಸೀತಾಂಗೋಳಿ ಮುಗುವಿನ ಅಬೂಬಕ್ಕರ್ ಸಿದ್ದಿಕ್ ( 32) ನ ಕೊಲೆಗೆ ಸಂಬಂಧಪಟ್ಟಂತೆ ಮೂವರನ್ನು ವಿಶೇಷ ತನಿಖಾ ತಂಡ ಬಂಧಿಸಿದ್ದು , ಇದರಿಂದ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಐದಕ್ಕೇರಿದೆ.
ಬಂಧಿತರನ್ನು ಮಂಜೇಶ್ವರ ಉದ್ಯಾವರದ ರಿಯಾಜ್ ಹಸನ್ ( 33) , ಉಪ್ಪಳ ಬಿ . ಟಿ ರಸ್ತೆಯ ಅಬ್ದುಲ್ ರಜಾಕ್ ( 46) ಮತ್ತು ಕುಂಜತ್ತೂರಿನ ಅಬೂಬಕ್ಕರ್ ಸಿದ್ದಿಕ್ ( 33) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಜೇಶ್ವರದ ಅಬ್ದುಲ್ ರಹೀಮ್ ಮತ್ತು ಅಬ್ದುಲ್ ಅಝೀಜ್ ನನ್ನು ಈ ಹಿಂದೆ ಬಂಧಿಸಲಾಗಿತ್ತು .
ಜೂನ್ 29 ರಂದು ಅಬೂಬಕ್ಕರ್ ಸಿದ್ದಿಕ್ ನನ್ನು ತಂಡವು ಅಪಹರಿಸಿ ಪೈವಳಿಕೆಯ ಮನೆಯೊಂದರಲ್ಲಿ ದಿಗ್ಬಂಧನದಲ್ಲಿರಿಸಿ ಥಳಿಸಿ ಕೊಲೆಗೈಯ್ಯಲಾಗಿತ್ತು. ಬಳಿಕ ಕಾರೊಂದರಲ್ಲಿ ಬಂದ್ಯೋಡಿನ ಖಾಸಗಿ ಆಸ್ಪತ್ರೆಯ ಆವರಣದಲ್ಲಿ ಮೃತದೇಹವನ್ನು ತೊರೆದು ತಂಡವು ಪರಾರಿಯಾಗಿತ್ತು.
ಕೃತ್ಯದಲ್ಲಿ ಶಾಮೀಲಾಗಿರುವ ಇನ್ನೂ ಐದಕ್ಕೂ ಅಧಿಕ ಮಂದಿ ತಲೆಮರೆಸಿಕೊಂಡಿದ್ದು , ಇವರಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ