ಭಟ್ಕಳ: ನಕಲಿ ದಾಖಲೆ ಪತ್ರ ಸೃಷ್ಟಿಸಿದ ಆರೋಪ; ಓರ್ವ ಸೆರೆ
ಭಟ್ಕಳ: ಉದ್ಯೋಗಿಯೋರ್ವರಿಗೆ ಪಿಎಫ್ (ಎಂಫ್ಲಾಯೀಸ್ ಪ್ರಾವಿಡೆಂಟ್ ಫಂಡ್) ಹಣವನ್ನು ದೊರಕಿಸಿ ಕೊಡಲು ನಕಲಿ ದಾಖಲೆ ಪತ್ರ ಸೃಷ್ಟಿಸಿದ ಆರೋಪದಲ್ಲಿ ಭಟ್ಕಳ ಶಹರ ಠಾಣೆ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.
ಮುಂಡಳ್ಳಿಯ ರಾಜೇಶ ದೇವಡಿಗ (30) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಈತನಿಂದ ವಿವಿಧ ಪ್ರೌಢಶಾಲೆ, ಕಂಪೆನಿಗಳ ಸೀಲ್ಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಅರೋಪಿಯು ಸಾಗರದ ವ್ಯಕ್ತಿಯೋರ್ವರಿಂದ ಸೀಲ್ಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳುತ್ತಿದ್ದ ಬಗ್ಗೆ ಮಾಹಿತಿ ಲಭಿಸಿದೆ. ಹುಬ್ಬಳ್ಳಿಯ ಪಿಎಫ್ ಕಚೇರಿಗೆ ಸಲ್ಲಿಕೆಯಾಗಿದ್ದ ದಾಖಲೆಗಳಲ್ಲಿನ ಸಹಿ ಹೊಂದಾಣಿಕೆಯಾಗದೆ, ಕಂಪೆನಿಯ ಮಾಲಕರಿಗೆ ಕಳುಹಿಸಿದ್ದ ಸಂದರ್ಭ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಅರ್ಶದ್ ಕ್ಯಾಶ್ಯೂ ಇಂಡಸ್ಟ್ರಿ ಮಾಲಕ ಮಹಮ್ಮದ್ ಇಬ್ರಾಹಿಂ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
Next Story