ದಸರಾ ಸಂಭ್ರಮ: ಮಂಗಳಾದೇವಿಗೆ ಸ್ವರ್ಣ ಪ್ರಭಾವಳಿ- ಪಾದುಕೆ ಸಮರ್ಪಣೆ
ಮಂಗಳೂರು, ಸೆ. 26: ದಸರಾ ಮಹೋತ್ಸವದ ಆರಂಭ ದಿನವಾದ ಇಂದು ಮಹತೋಭಾರ ಮಂಗಳಾದೇವಿ ದೇವಸ್ಥಾನದಲ್ಲಿ ಭಕ್ತರಿಂದ ಸಂಗ್ರಹವಾದ 2 ಕೆಜಿಯ ಚಿನ್ನಾಭರಣಗಳ ಸ್ವರ್ಣ ಪ್ರಭಾವಳಿ ಹಾಗೂ ಸ್ವರ್ಣ ಪಾದುಕೆಯನ್ನು ಮಂಗಳಾಂಬೆಗೆ ಸಮರ್ಪಿಸಲಾಯಿತು.
ಭಕ್ತರಿಂದ ಸಂಗ್ರಹವಾದ 1.25 ಕೋಟಿ ರೂ. ವೆಚ್ಚದಲ್ಲಿ ಈ ಸ್ವರ್ಣ ಪ್ರಭಾವಳಿ ಹಾಗೂ ಪಾದುಕೆಯನ್ನು ಸಮರ್ಪಣೆ ಮಾಡಲಾಗಿದ್ದು, ಇದೇ ವೇಳೆ ದೇವಸ್ತಾನದ ಮುಖ ಮಂಟಪ ಹಾಗೂ ನಾಗದೇವರಿಗೆ ಬೆಳ್ಳಿಯ ಹೊದಿಕೆಯನ್ನು ಅಶೋಕನ್ ಟಿ.ಎ. ನೀಡಿದರು. ಶಾಸಕ ವೇದವ್ಯಾಸ ಕಾಮತ್, ಮಪಾ ಮೇಯರ್ ಜಯಾನಂದ ಅಂಚನ್ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ನಿಕಟಪೂರ್ವ ಮೇಯರ್ ಪ್ರೇಮಾನಂದ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಮೀನುಗಾರಿಕಾ ಅಭಿವೃದ್ಧಿ ನಿಗಮದ ನಿಕಟಪೂರ್ವ ಅಧ್ಯಕ್ಷ ನಿತಿನ್ ಕುಮಾರ್, ಶಕ್ತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ.ಸಿ. ನಾಯ್ಕೆ, ಪುಷ್ಪಕನ್ನಡಿ ಹಾಗೂ ದೇವರ ಪಾದುಕೆ ತಯಾರು ಮಾಡಿದ ಕೆನರಾ ಜುವೆಲ್ಲರ್ಸ್ನ ಮಾಲಕ ಧನಂಜಯ್ ಪಾಲ್ಕೆ ಮೊದಲಾದವರು ಉಪಸ್ಥಿತರಿದ್ದರು.
ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೊಕ್ತೇಸರ ರಮನಾಥ ಹೆಗ್ಡೆ ಸ್ವಾಗತಿಸಿದರು. ಟ್ರಸ್ಟಿಗಳಾದ ರಾಮನಾಯ್ಕಿ ಕೋಟೆಕಾರ್, ಪ್ರೇಮಲತಾ ಎಸ್. ಕುಮಾರ್, ಅನುವಂಶಿಕ ಮೊಕ್ತೇಸರರಾದ ಜಿ. ರಘುರಾಮ ಉಪಾಧ್ಯಾಯ, ದೇವಳದ ತಂತ್ರಿಗಳಾದ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿ, ಪರ್ಯಾಯ ಪ್ರಧಾನ ಅರ್ಚಕ ಎಂ. ರಾಮಚಂದ್ರ ಐತಾಳ್, ಶ್ರೀನಿವಾಸ್ ಐತಾಳ್ ಉಪಸ್ಥಿತರಿದ್ದರು.
ಮಲ್ಲಿಕಾ ಕಲಾವೃಂದದ ಅಧ್ಯಕ್ಷ ಸುಧಾಕರ ಪೇಜಾವರ ವಂದಿಸಿದರು. ಕೆ. ವಿನಯಾನಂದ ಕಾನಡ್ಕ ಕಾರ್ಯಕ್ರಮ ನಿರೂಪಿಸಿದರು.