ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಹತ್ತು ಮಂದಿ ಪಿಎಫ್ಐ ಮುಖಂಡರ ಬಂಧನ
ಮಂಗಳೂರು, ಸೆ.27: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ವಿವಿಧೆಡೆ ಸೋಮವಾರ ತಡರಾತ್ರಿ 10 ಮಂದಿ ಪಿಎಫ್ಐ(PFI) ಮುಖಂಡರನ್ನು ಬಂಧಿಸಿರುವ ಪೊಲೀಸರು ಅವರನ್ನು ತಹಶೀಲ್ದಾರರ ಮುಂದೆ ಹಾಜರುಪಡಿಸಿದ್ದಾರೆ.
ಇತ್ತೀಚೆಗೆ ದ.ಕ. ಜಿಲ್ಲೆಯ ಹಲವು ಕಡೆ ದಾಳಿ ನಡೆಸಿದ ‘ಎನ್ಐಎ’ ತಂಡವು 5 ಮಂದಿಯನ್ನು ಬಂಧಿಸಿತ್ತು. ಇದನ್ನು ವಿರೋಧಿಸಿ ಹಲವು ಕಡೆ ಪಿಎಫ್ಐ ಪ್ರತಿಭಟನೆ ನಡೆಸಿತ್ತು. ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಮಂಗಳೂರು ಉತ್ತರ, ಮಂಗಳೂರು ಗ್ರಾಮಾಂತರ, ಉಳ್ಳಾಲ, ಬಜ್ಪೆ, ಸುರತ್ಕಲ್, ಮೂಡುಬಿದಿರೆ ಠಾಣಾ ವ್ಯಾಪ್ತಿಯ ಹಲವು ಕಡೆ ದಾಳಿ ನಡೆಸಿರುವ ಪೊಲೀಸರು 10 ಮಂದಿಯನ್ನು ಬಂಧಿಸಿರುವುದಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಪಾಂಡೇಶ್ವರದ ಮುಹಮ್ಮದ್ ಶರೀಫ್, ಕುದ್ರೋಳಿಯ ಮುಝೈರ್, ಕುದ್ರೋಳಿಯ ಮುಹಮ್ಮದ್ ನೌಫಾಲ್ ಹಂಝ, ತಲಪಾಡಿ ಕೆ.ಸಿ.ನಗರದ ಶಬೀರ್ ಅಹ್ಮದ್, ಉಳ್ಳಾಲ ಮಾಸ್ತಿಕಟ್ಟೆಯ ನವಾಝ್ ಉಳ್ಳಾಲ, ಉಳಾಯಿಬೆಟ್ಟು ಮುಹಮ್ಮದ್ ಇಕ್ಬಾಲ್, ಚೊಕ್ಕಬೆಟ್ಟು -ಕೃಷ್ಣಾಪುರದ ದಾವೂದ್ ನೌಶಾದ್, ಕಿನ್ನಿಪದವಿನ ಮುಹಮ್ಮದ್ ನಝೀರ್, ಬಜ್ಪೆಯ ಇಸ್ಮಾಯೀಲ್ ಇಂಜಿನಿಯರ್, ಪುತ್ತಿಗೆ ಮುಂಡೇಲು ಮನೆಯ ಇಬ್ರಾಹೀಂ ಎಂಬವರನ್ನು ಸೆಕ್ಷನ್ 107, 157 ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.