ಉಪ್ಪಿನಂಗಡಿ: ಬಾಂಬ್ ನಿಷ್ಕ್ರಿಯ ದಳ, ಶ್ವಾನದಳದಿಂದ ದಿಢೀರ್ ತಪಾಸಣೆ
ಉಪ್ಪಿನಂಗಡಿ, ಆ.11: ಇಲ್ಲಿನ ಬಸ್ ನಿಲ್ದಾಣಕ್ಕೆ ಗುರುವಾರ ಸಂಜೆ ದಿಢೀರ್ ಭೇಟಿ ನೀಡಿದ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳ ಇಲ್ಲಿನ ಬಸ್ ನಿಲ್ದಾಣವನ್ನು ತೀವ್ರ ತಪಾಸಣೆ ನಡೆಸಿತು.
ಸ್ವಾತಂತ್ರ ದಿನಾಚರಣೆ ಸಂದರ್ಭ ಜಿಲ್ಲಾದ್ಯಂತ ವಿಧ್ವಂಸಕ ಕೃತ್ಯಗಳು ನಡೆಯದಂತೆ ಕಟ್ಟೆಚ್ಚರ ವಹಿಸಲು ಹಾಗೂ ತೀವ್ರ ಜನಸಂದಣಿ ಪ್ರದೇಶಗಳಾದ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಪ್ರಮುಖ ಪಟ್ಟಣದ ರಸ್ತೆಗಳು, ಧಾರ್ಮಿಕ ಕೇಂದ್ರಗಳನ್ನು ತಪಾಸಣೆ ನಡೆಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್ರಾವ್ ಬೊರಸೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳ ಜಂಟಿಯಾಗಿ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಬೇಟಿ ನೀಡಿ ತಪಾಸಣೆ ನಡೆಸುತ್ತಿವೆ.
ಮಂಗಳೂರಿನಿಂದ ಆಗಮಿಸಿದ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳದ ಆರು ಮಂದಿಯ ತಂಡ ಉಪ್ಪಿನಂಗಡಿ ಪೊಲೀಸರ ನೆರವಿನೊಂದಿಗೆ ಇಲ್ಲಿನ ನಿಲ್ದಾಣದಲ್ಲಿ ಸುತ್ತಾಡಿ ತೀವ್ರ ತಪಾಸಣೆ ನಡೆಸಿದವು. ಹೀಗೆ ದಿಢೀರ್ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳದ ತಂಡ ಬಸ್ ನಿಲ್ದಾಣವನ್ನು ತಪಾಸಣೆ ನಡೆಸುತ್ತಿರುವುದು ಹಲವರ ಕುತೂಹಲಕ್ಕೆ ಕಾರಣವಾಯಿತು.