ಹಡಗಿನಲ್ಲಿ ಕರ್ತವ್ಯ ನಿರ್ವಹಣೆ ವೇಳೆ ಉದುಮ ನಿವಾಸಿ ಯುವಕ ನಾಪತ್ತೆ
ಕಾಸರಗೋಡು, ಆ.13: ಹಡಗಿನಲ್ಲಿ ಕ್ಯಾಟರಿಂಗ್ ನೌಕರನಾಗಿ ಕೆಲಸ ನಿರ್ವಹಿಸುತ್ತಿದ್ದ ಕಾಸರಗೋಡು ಉದುಮ ನಿವಾಸಿ ಯುವಕನೋರ್ವ ಪನಾಮ ಸಮುದ್ರದಲ್ಲಿ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.
ಎಂ.ವಿ. ಬೋಷಾ ಬ್ರೆಸಲ್ಸ್ ಹಡಗಿನಲ್ಲಿ ಕ್ಯಾಟರಿಂಗ್ ನೌಕರನಾಗಿದ್ದ ಉದುಮ ಪಾಲಕುನ್ನುವಿನ ನಿಖಿಲ್ ( ೨೧) ನಾಪತ್ತೆಯಾದವನು.
ಈತ ಆ.11ರಂದು ಮುಂಜಾನೆ ಕೆಲಸಕ್ಕೆ ತೆರಳಿದ್ದು, ಮಧ್ಯಾಹ್ನ ವಿಶ್ರಾಂತಿ ಸಮಯದಲ್ಲಿ ನೋಡಿದಾಗ ಈತ ನಾಪತ್ತೆಯಾಗಿದ್ದನೆನ್ನಲಾಗಿದೆ. ಹಡಗಿನಲ್ಲಿ ಶೋಧ ನಡೆಸಿದರೂ ಪತ್ತೆಯಾಗಿಲ್ಲ ಎನ್ನಲಾಗಿದೆ. ನಾಪತ್ತೆಯಾದ ಬಗ್ಗೆ ಖಚಿತ ಪಡಿಸಿದ ಇತರ ಉದ್ಯೋಗಿಗಳು ಕಂಪೆನಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಇದೀಗ ಕಂಪೆನಿ ಅಧಿಕಾರಿಗಳು ಮನೆಯವರಿಗೆ ನಿಖಿಲ್ ನಾಪತ್ತೆಯಾದ ಬಗ್ಗೆ ಮಾಹಿತಿ ನೀಡಿದ್ದಾರೆ.
ಮುಂಬೈ ಕೇಂದ್ರವಾಗಿರುವ ಆಂಗ್ಲೋ ಈಸ್ಟರ್ನ್ ಶಿಪ್ಪಿಂಗ್ ಮೆನೇಜ್ಮೆಂಟ್ ಕಂಪೆನಿಯ ಹಡಗಿಗೆ 2016ರ ಜನವರಿಯಲ್ಲಿ ನಿಖಿಲ್ ಉದ್ಯೋಗಕ್ಕೆ ಸೇರಿದ್ದರು. ಮುಂದಿನ ತಿಂಗಳು ಮನೆಗೆ ಬರುವವರಿದ್ದರು ಎನ್ನಲಾಗಿದೆ. ನಿಖಿಲ್ ನಿಗೂಢವಾಗಿ ನಾಪತ್ತೆಯಾಗಿರುವುದು ಮನೆಮಂದಿಯನ್ನು ಕಂಗಾಲಾಗಿಸಿದೆ