ಉಡುಪಿ ಸರಕಾರಿ ಆಸ್ಪತ್ರೆಯನ್ನು ಸರಕಾರವೇ ನಡೆಸಲಿ: ಮುಸ್ಲಿಮ್ ಒಕ್ಕೂಟ ಆಗ್ರಹ
ಉಡುಪಿ, ಸೆ.3: ಉಡುಪಿಯ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಖಾಸಗಿ ಒಡೆತನಕ್ಕೆ ಒಪ್ಪಿಸುವ ರಾಜ್ಯ ಸರಕಾರದ ನಿರ್ಧಾರವನ್ನು ಕೂಡಲೇ ಕೈಬಿಡಬೇಕು. ಇದನ್ನು ಸರಕಾರವೇ ನಡೆಸಿಕೊಂಡು ಹೋಗಬೇಕು ಮತ್ತು ಇದರ ಅಭಿವೃದ್ಧಿಗೆ ಆವಶ್ಯವಿರುವ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಆಗ್ರಹಿಸಿದೆ.
ಕೋಮು ಸೌಹಾರ್ದ, ಬ್ಯಾಂಕಿಂಗ್ ಕ್ಷೇತ್ರ, ಬಡವರ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಹಾಗೂ ಈ ಆಸ್ಪತ್ರೆಗೆ ಭೂಮಿಯನ್ನು ದಾನ ಮಾಡಿರುವ ಹಾಜಿ ಅಬ್ದುಲ್ಲಾ ಸಾಹೇಬರ ಹೆಸರನ್ನು ಆಸ್ಪತ್ರೆಗೆ ಇಡಬೇಕು. ಈ ಆಸ್ಪತ್ರೆಯನ್ನು ಉಳಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಜಾಗೃತರಾಗಬೇಕು ಎಂದು ಒಕ್ಕೂಟದ ಜೊತೆ ಕಾರ್ಯದರ್ಶಿ ಸಲಾವುದ್ದೀನ್ ಅಬ್ದುಲ್ಲಾ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಈ ಆಸ್ಪತ್ರೆಯನ್ನು ಉಳಿಸುವ ನಿಟ್ಟಿನಲ್ಲಿ ಒಕ್ಕೂಟದೊಂದಿಗೆ ಅದರ ಸಹಭಾಗಿ ಸಂಘಟನೆಗಳಾದ ಉಡುಪಿ ಜಿಲ್ಲಾ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಶನ್, ಜಮಾಅತೆ ಇಸ್ಲಾಮೀ ಹಿಂದ್, ಪಾಪ್ಯುಲಪ್ ಫ್ರಂಟ್ ಆಫ್ ಇಂಡಿಯಾ, ದಾವಾ ಸೆಂಟರ್, ಜಮಿಯ್ಯತುಲ್ ಫಲಾಹ್, ಮುಸ್ಲಿಮ್ ಲೇಖಕರ ಸಂಘ, ಎಸ್ಐಒ, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಸಾಲಿಡಾರಿಟ ಯೂತ್ ಮೂವ್ವೆುಂಟ್ ಕೈಜೋಡಿಸಿದ್ದು, ಮುಂದೆ ಅಗತ್ಯ ಬಿದ್ದರೆ ಈ ಬಗ್ಗೆ ಹೋರಾಟ ನಡೆಸಲಾಗುವುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಹಿರಿಯ ಉಪಾಧ್ಯಕ್ಷ ಹಾಜಿ ಅಬ್ದುಲ್ಲಾ ಪರ್ಕಳ, ಪ್ರಧಾನ ಕಾರ್ಯದರ್ಶಿ ಖಾಸಿಂ ಬಾರಕೂರು, ಸದಸ್ಯ ಅಬ್ದುಲ್ ಖತೀಬ್ ರಶೀದ್, ಇಸ್ಮಾಯೀಲ್ ಹುಸೈನ್, ಹುಸೈನ್ ಕೋಡಿಬೆಂಗ್ರೆ ಉಪಸ್ಥಿತರಿದ್ದರು.