ಮುಕ್ಕಚ್ಚೇರಿ: ಅಂಗಡಿಗೆ ನುಗ್ಗಿ ಕಳವು
ಮಂಗಳೂರು, ಸೆ. 16: ಮುಕ್ಕಚ್ಚೇರಿಯಲ್ಲಿ ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳರು ನಗದು ಸಹಿತ ಅಂಗಡಿಯಲ್ಲಿನ ವಸ್ತುಗಳನ್ನು ದೋಚಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ.
ಮುಕ್ಕಚ್ಚೇರಿ ಒಂಬತ್ತುಕೆರೆ ನಿವಾಸಿ ಸಿರಾಜುದ್ದೀನ್ ಇಕ್ಬಾಲ್ (36) ಎಂಬವರು ಮುಕ್ಕಚ್ಚೇರಿ ಮಸೀದಿಯ ಎದುರು ಅಂಗಡಿಯನ್ನು ಹೊಂದಿದ್ದು, ಗುರುವಾರ ಬೆಳಗ್ಗೆ ಅಂಗಡಿ ತೆರೆಯಲು ಬಂದಾಗ ಕಳವು ಆಗಿರುವುದು ಬೆಳಕಿಗೆ ಬಂದಿದೆ.
ಸಿರಾಜುದ್ದೀನ್ ಅವರು ಬುಧವಾರ ರಾತ್ರಿ ಎಂದಿನಂತೆ ಅಂಗಡಿಯ ಶಟರ್ ಹಾಕಿ ಬೀಗ ಜಡಿದು ಮನೆಗೆ ತೆರಳಿದ್ದರು. ಬುಧವಾರ ರಾತ್ರಿ ಹಾಗೂ ಗುರುವಾರ ಮುಂಜಾವಿನ ಮಧ್ಯೆ ಕಳ್ಳತನ ನಡೆದಿರಬೇಕೆಂದು ಶಂಕಿಸಲಾಗಿದೆ. ಅಂಗಡಿಯಲ್ಲಿದ್ದ 3000 ನಗದು, ಸುಮಾರು 8 ಸಾವಿರ ರೂ. ವೌಲ್ಯದ ರೀಚಾರ್ಜ್ ಸಿಮ್ಗಳನ್ನು ಹೊಂದಿದ್ದ ಎರಡು ಮೊಬೈಲ್ ಸೆಟ್, ಇನ್ನೋಂದು ಸ್ಕ್ರೀನ್ ಟಚ್ ಮೊಬೈಲ್ ಸಹಿತ ನಾಲ್ಕು ಮೊಬೈಲ್ಗಳು ಕಳವಾಗಿದೆ.
ಅಲ್ಲದೆ, ಸುಮಾರು 1000ಕ್ಕೂ ಹೆಚ್ಚಿನ ವೌಲ್ಯದ ಅಂಗಡಿಯಲ್ಲಿದ್ದ ಕಿಂಡರ್ ಜಾಯ್ ಎಂಬ ಸಿಹಿ ತಿನಿಸುಗಳ ಎರಡು ಬಾಕ್ಸ್, ಐಸ್ಕ್ರೀಂ ಬಾಕ್ಸ್ಗಳನ್ನೇ ಕಳ್ಳರು ಹೊತ್ತೊಯ್ದಿದ್ದಾರೆ ಎಂದು ಸಿರಾಜುದ್ದೀನ್ ಉಳ್ಳಾಲ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.