ಮರದ ಸೋಂಟೆಯಿಂದ ಹಲ್ಲೆಗೈದು ವ್ಯಕ್ತಿಯ ಕೊಲೆ
ಮೂವರು ಪೊಲೀಸ್ ವಶಕ್ಕೆ
ಮಂಗಳೂರು, ಸೆ.26: ವ್ಯಕ್ತಿಯೋರ್ವರ ಮೇಲೆ ಮರದ ಸೋಂಟೆಯಿಂದ ಹಲ್ಲೆ ನಡೆಸಿ ಕೊಲೆಗೈದ ಘಟನೆ ಮಂಗಳೂರು ಹೊರವಲಯದ ಬಜ್ಪೆ ಠಾಣಾ ವ್ಯಾಪ್ತಿಯ ನೀರುಡೆ ಗ್ರಾಮದಲ್ಲಿ ರವಿವಾರ ತಡರಾತ್ರಿ ಸಂಭವಿಸಿದೆ.
ಮೃತರನ್ನು ನೀರುಡೆ ಗ್ರಾಮದ ನಿವಾಸಿ ರಾಜು ಪೂಜಾರಿ(37) ಎಂದು ಗುರುತಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಓರ್ವ ಮಹಿಳೆ ಸಹಿತ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಿನೇಶ (35), ಸುಧಾಕರ (27) ಮತ್ತು ಸುಲೋಚನಾ (40) ಬಂಧಿತ ಆರೋಪಿಗಳು.
ಮೃತ ರಾಜು ಮತ್ತು ಆರೋಪಿಗಳ ನಡುವೆ ಉಂಟಾದ ವಾಗ್ವಾದವೇ ಘಟನೆಗೆ ಕಾರಣ ಎನ್ನಲಾಗಿದೆ. ಬಂಧಿತ ಆರೋಪಿಗಳ ಪೈಕಿ ಓರ್ವರಾದ ಸುಲೋಚನಾ ವಿಧವೆಯಾಗಿದ್ದು, ತನ್ನ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಸುಲೋಚನಾ ಅವರ ಮನೆಗೆ ರಾಜು ಪೂಜಾರಿ ಬರುತ್ತಿದ್ದರು ಎನ್ನಲಾಗಿದೆ. ರವಿವಾರ ರಾತ್ರಿ ವೇಳೆ ರಾಜು ಪೂಜಾರಿ ಮತ್ತು ಸುಲೋಚನಾ ಅವರ ಸಂಬಂಧಿಕರಾದ ದಿನೇಶ, ಸುಧಾಕರರ ನಡುವೆ ವಾಗ್ವಾದ ನಡೆದಿತ್ತು. ಈ ಸಂದರ್ಭ ಆರೋಪಿಗಳು ರಾಜು ಪೂಜಾರಿಯವರಿಗೆ ಮರದ ಸೋಂಟೆಯಿಂದ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರನ್ನು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ.