ಸ್ವಚ್ಛ ಭಾರತ ಗಾಂಧೀಜಿಯ ಕನಸಾಗಿದೆ: ಸಂಸದ ನಳಿನ್
ಗಾಂಧಿಜಯಂತಿ ಅಂಗವಾಗಿ ಸ್ವಚ್ಛತಾ ಅಭಿಯಾನ
ಪುತ್ತೂರು, ಅ.3: ಸ್ವಚ್ಛತೆ ಹಾಗೂ ಚಾರಿತ್ರ್ಯಪೂರ್ಣ ಸಮಾಜದಿಂದ ಅಭಿವೃದ್ಧಿ ಸಾಧ್ಯವಾಗಿದೆ. ಜನರ ಮನಪರಿವರ್ತನೆ ಮೂಲಕ ಸ್ವಚ್ಛತೆ ಹಾಗೂ ಚಾರಿತ್ರ್ಯಪೂರ್ಣ ಸಮಾಜದ ಕನಸನ್ನು ಸ್ವಾತಂತ್ರ್ಯ ಪೂರ್ವದಲ್ಲೇ ಗಾಂಧಿ ಕಂಡಿದ್ದರು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಗಾಂಧಿಜಯಂತಿ ಅಂಗವಾಗಿ ಪುತ್ತೂರು ಬಿಜೆಪಿ ನಗರ ಮಂಡಲ ಮತ್ತು ಗ್ರಾಮಾಂತರ ಮಂಡಲದ ವತಿಯಿಂದ ರವಿವಾರ ಪುತ್ತೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ನಡೆದ ಸ್ವಚ್ಛತಾ ಅಭಿಯಾನಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.
ಮಹಾತ್ಮ ಗಾಂಧಿಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ಸ್ವಚ್ಛ ಭಾರತದ ಮೂಲಕ ನನಸು ಮಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಯಶಸ್ಸಿನ ಹೆಜ್ಜೆ ಇಟ್ಟಿದ್ದಾರೆ. ಸ್ವಚ್ಛ ಭಾರತದ ಪರಿಕಲ್ಪನೆಗೆ ಕೇವಲ ಒಂದು ದಿನ ಗುಡಿಸಿದರೆ ಆಗುವುದಿಲ್ಲ. ಆರಂಭದಲ್ಲಿ ನಮ್ಮ ಮನೆಯಲ್ಲಿ ಪ್ರಾರಂಭವಾಗಬೇಕು. ಆಗ ಸ್ವಚ್ಛ ಭಾರತದ ಕನಸು ನನಸಾಗುತ್ತದೆ. ಮಹಾತ್ಮಗಾಂಧಿಜಿಯವರು ಕಂಡಿರುವ ಕನಸು ದೀನ್ ದಯಾಳ್ ಉಪಾಧ್ಯಾಯರ ಆಶಯವನ್ನು ಪೂರೈಸುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಯಶಸ್ವಿಯಾಗಿದ್ದಾರೆ. ಮುಂದೆ ಜನ ಮತ್ತು ಮನ ಎರಡೂ ಪರಿವರ್ತನೆಯಾದರೆ ಸ್ವಚ್ಛ ಭಾರತದ ಪರಿಕಲ್ಪನೆ ಪೂರ್ಣಗೊಳ್ಳುತ್ತದೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಕಾರ್ಯದರ್ಶಿ ಶಂಭು ಭಟ್, ನಗರ ಮಂಡಲದ ಅಧ್ಯಕ್ಷ ಜೀವಂಧರ್ ಜೈನ್ ಉಪಸ್ಥಿತರಿದ್ದರು.