ಐದನೆ ಪರ್ಯಾಯ ಮಹೋತ್ಸವ: ಸಮನ್ವಯದಿಂದ ಕಾರ್ಯ ನಿರ್ವಹಿಸಿ; ಇಲಾಖೆಗಳಿಗೆ ಸಚಿವ ಸೊರಕೆ ಕರೆ
ಉಡುಪಿ, ಜ.1: ಪೇಜಾವರ ಶ್ರೀಗಳ ಐದನೆ ಪರ್ಯಾಯ ಮಹೋತ್ಸವ ಜ.17 ಮತ್ತು 18ರಂದು ನಡೆಯಲಿದ್ದು, ಕಾರ್ಯಕ್ರಮದ ಯಶಸ್ಸಿಗೆ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಸೂಚಿಸಿದ್ದಾರೆ.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪರ್ಯಾಯೋತ್ಸವ ಪ್ರಯುಕ್ತ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕಾರ್ಕಳದ ಮಹಾಮಸ್ತಕಾಭಿಷೇಕ ಹಾಗೂ ಅತ್ತೂರು ಜಾತ್ರೆಯಂಥ ಬೃಹತ್ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಹೆಗ್ಗಳಿಕೆ ಜಿಲ್ಲೆಗಿದ್ದು, ಅದೇ ರೀತಿ ಪರ್ಯಾಯೋತ್ಸವದಲ್ಲೂ ಕಾರ್ಯ ನಿರ್ವಹಿಸು ವಂತೆ ಅವರು ಹೇಳಿದರು.
ಜ.4ರಂದು ಪೇಜಾವರ ಯತಿಗಳು ಪುರಪ್ರವೇಶ ಮಾಡಲಿರು ವುದರಿಂದ ಆ ಸಂದರ್ಭ ಸೂಕ್ತ ಸಂಚಾರ ವ್ಯವಸ್ಥೆ ನಿರ್ವಹಿಸುವಂತೆ ಹಾಗೂ ಹೊರೆಕಾಣಿಕೆ ಸಂದರ್ಭ ಸುಗಮ ವಾಹನ ಸಂಚಾರ ಮತ್ತು ಪರ್ಯಾಯ ಸಮಯದಲ್ಲಿ ವಾಹನಗಳ ನಿಲುಗಡೆ ಮತ್ತು ಸಂಚಾರಕ್ಕೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ವಿಶಾಲ್ ಸೂಚಿಸಿದರು.
ಈಗಾಗಲೇ ಅಗತ್ಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲು ಸಿದ್ಧತೆ ನಡೆಸಿದ್ದು, ಮಹಿಳಾ ಪೊಲೀಸ್ ಮತ್ತು ಗೃಹ ರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಅಗತ್ಯವಿರುವಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಸಿದ್ಧತೆ ನಡೆಸಿದ್ದು, ಪರ್ಯಾಯ ಸಮಯದಲ್ಲಿ ಪಿಕ್ಪಾಕೆಟ್, ಸರಗಳ್ಳತನ ಮುಂತಾದ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಜಿಲ್ಲೆಯ ಮತ್ತು ಹೊರಜಿಲ್ಲೆಗಳ ಪೊಲೀಸ್ ಅಪರಾಧ ವಿಭಾಗದ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಅಲ್ಲದೇ ಪೊಲೀಸ್ ಕಂಟ್ರೋಲ್ ರೂಂ ಹಾಗೂ ಸಿಸಿ ಕ್ಯಾಮರಾ ಕಂಟ್ರೋಲ್ ರೂಂ ಸ್ಥಾಪಿಸಲಾಗುವುದು. ಪಾರ್ಕಿಂಗ್ ವ್ಯವಸ್ಥೆಗೆ 24 ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಗಳು ಮಾಹಿತಿ ನೀಡಿದರು.
ಅಗ್ನಿಶಾಮಕ ಇಲಾಖೆ ಹಾಗೂ ತುರ್ತು ಆರೋಗ್ಯ ವ್ಯವ ಸ್ಥೆಗೆ ಆ್ಯಂಬುಲೆನ್ಸ್ ಹಾಗೂ ಸಿಬ್ಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿರಿಸುವಂತೆ ಅವರು ಸಂಬಂಧಿತ ಇಲಾಖೆಗಳಿಗೆ ತಿಳಿಸಿದರು. ಪರ್ಯಾಯ ಸಂದರ್ಭದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗದಂತೆ ಕ್ರಮ ವಹಿಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಮತ್ತು ಆಗಮಿಸುವ ಪ್ರಯಾ ಣಿಕರಿಗೆ ಹೆಚ್ಚಿನ ಬಸ್ ಸೌಕರ್ಯ ಒದಗಿಸುವಂತೆ ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಡಾ.ವಿಶಾಲ್ ಸೂಚನೆಗಳನ್ನು ನೀಡಿದರು.
ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರಿಗೆ ತಂಗಲು ಪ್ರವಾಸಿ ಮಂದಿರವನ್ನು ಸಿದ್ಧವಾಗಿಡುವಂತೆ ಮತ್ತು ಹೆಲಿಪ್ಯಾಡ್ ನಿರ್ಮಿಸುವಂತೆ ಲೋಕೊಪಯೋಗಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಜ.4ರಂದು ಸಂಜೆ 4 ಗಂಟೆಗೆ ಸ್ವಾಮೀಜಿ ಪುರಪ್ರವೇಶ ಮಾಡಲಿದ್ದು, ಮೆರವಣಿಗೆಯಲ್ಲಿ ಸ್ವಾಮೀಜಿಯ 600 ಶಿಷ್ಯರ ಬೈಕ್ ರ್ಯಾಲಿ, 55 ಕಲಾತಂಡಗಳಿಂದ ಮೆರವಣಿಗೆ ನಡೆಯಲಿದೆ. ಸುಮಾರು 3,000 ಜನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕೆ.ಎಂ.ಮಾರ್ಗವಾಗಿ ಮೆರವಣಿಗೆ ನಡೆಯಲಿದ್ದು, 6:30ಕ್ಕೆ ರಥಬೀದಿ ಪ್ರವೇಶಿಸಿ, 7:30ಕ್ಕೆ ಪೌರಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಸಭೆಯಲ್ಲಿ ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.