ಪುತ್ತೂರು: ಮಹಿಳೆಯರನ್ನು ಕಟ್ಟಿಹಾಕಿ ಹಾಡಹಗಲೇ ಮನೆಯಿಂದ ದರೋಡೆ
ಪುತ್ತೂರು, ಅ.25: ಹಾಡಹಗಲೇ ಒಂಟಿ ಮನೆಯೊಂದಕ್ಕೆ ವಾಹನದಲ್ಲಿ ಬಂದ ತಂಡವೊಂದು ಮನೆ ಮಂದಿಯನ್ನು ಕಟ್ಟಿಹಾಕಿ ನಗದು ಹಾಗೂ ಆಭರಣಗಳನ್ನು ದೋಚಿ ಪರಾರಿಯಾದ ಘಟನೆ ಮಂಗಳವಾರ ಮಧ್ಯಾಹ್ನ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಅಂಬಟೆಮೂಲೆ ಪಾದೆಕರ್ಯ ಎಂಬಲ್ಲಿ ನಡೆದಿದೆ.
ಪಾದೆಕರ್ಯ ನಿವಾಸಿ ವಿಷ್ಣು ಭಟ್ ಎಂಬವರ ಮನೆಗೆ ಕಾರಿನಲ್ಲಿ ಆಗಮಿಸಿದ ತಂಡ ಮನೆಯಲ್ಲಿದ್ದ ವಿಷ್ಣು ಭಟ್ ಅವರ ಪತ್ನಿ ಸಾವಿತ್ರಿ ಮತ್ತು ಕೆಲಸದಾಕೆ ಲತಾ ಎಂಬವರನ್ನು ಕಟ್ಟಿಹಾಕಿ ಮನೆಯಲಿದ್ದ 40 ಗ್ರಾಂ ಚಿನ್ನ, ಅರ್ಧ ಕಿಲೋ ಬೆಳ್ಳಿ, ಮತ್ತು 50 ಸಾವಿರ ರೂ.ನ್ನು ದೋಚಿದ್ದಾರೆ. ತಂಡದಲ್ಲಿ ಒಟ್ಟು 9 ರಿಂದ 10 ಮಂದಿಯಿದ್ದು, ಕಾರಿನಲ್ಲಿ ಮನೆಗೆ ಆಗಮಿಸಿದ ತಂಡ ಈ ಕೃತ್ಯವನ್ನು ಎಸಗಿ ಪರಾರಿಯಾಗಿದೆ.
ಪಾದೆಕರ್ಯ ವಿಷ್ಣು ಭಟ್ ಕೃಷಿಕರಾಗಿದ್ದು ಮಂಗಳವಾರ ಕಾಂರ್ುಕ್ರಮದ ನಿಮಿತ್ತ ಸುಮಾರು 10 ಗಂಟೆಯ ವೇಳೆ ಮನೆಯಿಂದ ತೆರಳಿದ್ದರು. ಈ ವೇಳೆ ಮನೆಯಲ್ಲಿ ಅವರ ಪತ್ನಿ ಸಾವಿತ್ರಿ ಮತ್ತು ಕೆಲಸದಾಕೆ ಲತಾ ಮಾತ್ರ ಇದ್ದರು. ಮಧ್ಯಾಹ್ನ ಸುಮಾರು 12 ಗಂಟೆಯ ವೇಳೆ ಕಾರಿನಲ್ಲಿ ಆಗಮಿಸಿದ ಸುಮಾರು 10 ಮಂದಿಯ ತಂಡದಲ್ಲಿದ್ದ ಓರ್ವ ವ್ಯಕ್ತಿ ಸಾವಿತ್ರಿ ಅವರಲ್ಲಿ ನೀರು ಕೇಳುವ ನೆಪದಲ್ಲಿ ಮಾತನಾಡಿಸಿದ್ದಾರೆ. ಈ ಸಂದರ್ಭದಲ್ಲಿ ಮನೆಯಿಂದ ಹೊರ ಬಂದ ಸಾವಿತ್ರಿ ಅವರನ್ನು ತಂಡದಲ್ಲಿದ್ದ ಇತರ ಮಂದಿ ಬೈರಾಸ್ ಒಂದರಲ್ಲಿ ಕಟ್ಟಿ ಹಾಕಿದ್ದಾರೆ. ಬಳಿಕ ಬಾಯಿಗೆ ಬಟ್ಟೆ ತುರುಕಿದ್ದಾರೆ. ಏನು ನಡೆಯುತ್ತಿದೆ ಎಂದು ಮನೆಯ ಹೊರಗಡೆ ಇದ್ದ ಕೆಲಸದಾಕೆ ಲತಾ ಅವರೂ ಈ ವೇಳೆ ಅಲ್ಲಿಗೆ ಬಂದಿದ್ದರು, ತಂಡ ಅವರನ್ನೂ ಕಟ್ಟಿ ಹಾಕಿ ಬಾಯಿಗೆ ಬಟ್ಟೆ ತುರುಕಿದ್ದಾರೆ.
ಈ ವೇಳೆ ಗದರಿಸಿದ ತಂಡ ಬೊಬ್ಬೆ ಹಾಕಿದರೆ ಕೊಂದು ಬಿಡುತ್ತೇವೆ ನಿಮ್ಮ ಹಣ , ಚಿನ್ನ ಎಲ್ಲಾ ಎಲ್ಲಿದೆ ಎಂದು ಹೇಳಬೇಕು ಇಲ್ಲವಾದರೆ ಕೊಲ್ಲುವುದಾಗಿ ಬೆದರಿಸಿದ್ದಾರೆ. ಬಳಿಕ ಅವರಿಂದ ಮಾಹಿತಿ ಪಡೆದು ಮನೆಯೊಳಗೆ ನುಗ್ಗಿದ ತಂಡ ಮನೆಯೊಳಗೆ ಮರದ ಪೆಟ್ಟಿಗೆಯನ್ನು ಕಬ್ಬಿಣದ ರಾಡಿನಿಂದ ಒಡೆದು ಹಾಕಿ ಅದರಲ್ಲಿದ್ದ 50 ಸಾವಿರ ನಗದು, 40 ಗ್ರಾಂ ಚಿನ್ನ ಮತ್ತು ಅರ್ಧ ಕಿಲೋ ಬೆಳ್ಳಿಯನ್ನು ದೋಚಿದ್ದಾರೆ.
ತುಳುವಿನಲ್ಲಿ ಮಾತನಾಡುತ್ತಿದ್ದರು
ದರೋಡೆಕೋರರು ತುಳು ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂದು ಸಾವಿತ್ರಿ ತಿಳಿಸಿದ್ದಾರೆ. ಯಾರೂ ಮುಖಕ್ಕೆ ಮುಸುಕು ಹಾಕಿರಲಿಲ್ಲ, ಅವರನ್ನು ಎಲ್ಲಿಯೂ ನೋಡಿದ ಮುಖ ಪರಿಚಯವಿಲ್ಲ, ನಮ್ಮನ್ನು ಕಟ್ಟಿ ಹಾಕಿದವರು ‘ ನಿಕ್ಲೆನ ದುಡ್ಡು ಬೊಕ್ಕ ಬಂಗಾರ್ ಮಾಂತ ಓಲುಂಡುಂದು ಪನ್ಲೆ, ದಮ್ಮು ದೆತ್ತರ್ದಂಡ ಕೆರ್ಪಾ ’(ನಿಮ್ಮಲ್ಲಿರುವ ಹಣ ಮತ್ತು ಚಿನ್ನ ಎಲ್ಲಾ ಎಲ್ಲಿದೆ ಎಂದು ಹೇಳಿ, ಮಾತನಾಡಿದರೆ ನಿಮ್ಮನ್ನು ಕೊಲ್ಲುತ್ತೇವೆ) ಎಂದು ಹೇಳಿ ಹೆದರಿಸಿದರು. ಬಳಿಕ ಮನೆಯೊಳಗೆ ಪ್ರವೇಶ ಮಾಡಿದ್ದಾರೆ. ದರೋಡೆ ಮಾಡಿದ ಬಳಿಕ ಕಟ್ಟನ್ನು ಬಿಚ್ಚದೆ ಎಲ್ಲರೂ ಅದೇ ಕಾರಿನಲ್ಲಿ ತೆರಳಿದ್ದು ಅರ್ಧ ಗಂಟೆಯೊಳಗೆ ತೆರಳಿದ್ದಾರೆ. ದರೋಡೆಕೋರರು ನಮಗೆ ಯಾವುದೇ ರೀತಿಯ ಹಲ್ಲೆಯನ್ನು ಮಾಡಿಲ್ಲ. ಅವರು ತೆರಳಿದ ಬಳಿಕ ಕೈಗೆ ಕಟ್ಟಿದ ಬಟ್ಟೆಯನ್ನು ಬಿಚ್ಚಿದ ನಾನು ಸ್ಥಳೀಯ ಪ್ರಜ್ವಲ್ ಎಂಬವರಿಗೆ ಮಾಹಿತಿ ನೀಡಿದೆ. ಬಳಿಕ ನನ್ನ ಯಜಮಾನರಿಗೆ ಮಾಹಿತಿ ನೀಡಿ ಬಳಿಕ ಪೊಲೀಸರಿಗೆ ವಿಷಯ ತಿಳಿಸಿದ್ದೇವೆ ಎಂದು ಸಾವಿತ್ರಿ ಅವರು ತಿಳಿಸಿದ್ದಾರೆ.
ವಿಷ್ಣು ಭಟ್ ಅವರದ್ದು ಪಾದೆಕರ್ಯದಲ್ಲಿ ಒಂಟಿ ಮನೆಯಾಗಿದೆ. ಕೂಗಳತೆಯ ದೂರದಲ್ಲಿ ಯಾವುದೇ ಮನೆಗಳಿಲ್ಲದ ಕಾರಣ ಈ ಬಗ್ಗೆ ಗೊತ್ತಿದ್ದವರೇ ಈ ಕೃತ್ಯ ಎಸಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ವಿಷ್ಣು ಭಟ್ ಅವರು ಒಂದು ದಿನ ಮೊದಲು ಅಡಿಕೆ ಮಾರಿದ್ದು ಈ ವಿಚಾರ ತಿಳಿದು ಕೃತ್ಯ ಎಸಗಿರುವ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಎಸ್ಪಿಭೂಷಣ್ ಗುಲಾಬ್ ರಾವ್ ಬೊರಸೆ , ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್ ಅನಿಲ್ ಎಸ್. ಕುಲಕರ್ಣಿ, ಪುತ್ತೂರು ಎಎಸ್ಪಿ ರಿಷ್ಯಂತ್, ಗ್ರಾಮಾಂತರ ಎಸ್ಸೈ ಅಬ್ದುಲ್ಖಾದರ್ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಆದರೆ ಘಟನಾ ಸ್ಥಳದಲ್ಲಿ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ಶ್ವಾನ ಮತ್ತು ಬೆರಳಚ್ಚು ತಜ್ಞರನ್ನು ಕರೆಸಲಾಗಿದೆ.