ಅಕ್ರಮ ಜಾನುವಾರು ಸಾಗಾಟ: ಇಬ್ಬರ ಬಂಧನ
ಮಂಗಳೂರು, ಅ. 5: ಅಕ್ರಮ ಜಾನುವಾರು ಸಾಗಾಟ ಮಾಡುತ್ತಿದ್ದ ಟಾಟಾ 407 ವಾಹನವನ್ನು ತಡೆದ ಪೊಲೀಸರು ಈ ಸಂಬಂಧ ಇಬ್ಬರನ್ನು ಬಂಧಿಸಿ ಜಾನುವಾರುಗಳನ್ನು ವಶಕ್ಕೆ ಪಡೆದ ಘಟನೆ ಸುರತ್ಕಲ್ ಟೋಲ್ಗೇಟ್ ಬಳಿ ಇಂದು ಮುಂಜಾನೆ ನಡೆದಿದೆ.
ಸುರತ್ಕಲ್ ಠಾಣಾ ಪಿಎಸ್ಸೈ ಕುಮಾರೇಶ್ವರನ್ರಿಗೆ ಉಡುಪಿ ಕಡೆಯಿಂದ ಒಂದು 407 ಟೆಂಪೋ ವಾಹನದಲ್ಲಿ ದನಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದಾರೆ ಎಂಬ ಮಾಹಿತಿ ಲಭಿಸಿತ್ತು. ಬೆಳಗ್ಗೆ ಸುಮಾರು 5:30ಕ್ಕೆ ಸಿಬ್ಬಂದಿಯೊಂದಿಗೆ ತೆರಳಿ ಸುರತ್ಕಲ್ ಗ್ರಾಮದ ಟೋಲ್ ಗೇಟ್ ಬಳಿ ವಾಹನ ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ಪಡುಬಿದ್ರೆ ಕಡೆಯಿಂದ ರಾ.ಹೆ 66ರಲ್ಲಿ ಬಂದ ಟಾಟಾ 407 ಟೆಂಪೋವನ್ನು ತಡೆದಿದ್ದಾರೆ. ವಾಹನ ಚಾಲಕ ಹಾಗೂ ಅದರಲ್ಲಿದ್ದ ಕೆಲವರು ವಾಹನದಿಂದ ಇಳಿದು ತಪ್ಪಿಸಿಕೊಳ್ಳುತ್ತಿದ್ದಾಗ ಪೊಲೀಸರು ಇಬ್ಬರನ್ನು ಬೆನ್ನಟ್ಟಿ ಹಿಡಿದಿದ್ದು, ಉಳಿದವರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಬೂಬಕರ್ (36) ಮತ್ತು ಅಬ್ದುಲ್ ಖಾದರ್ (39) ಎಂದು ಗುರುತಿಸಲಾಗಿದೆ. ಅನ್ವರ್ಗಿರಿಯ ಅನ್ವನ್, ಮುಹಮ್ಮದ್ ಹಸನ್ ಮೊಯ್ಸಿನ್, ಆಸಿಫ್ ಕುಡಂಬೂರು ಆಸಿಫ್ ಎಂಬವರು ಪರಾರಿಯಾಗಿದ್ದಾರೆ. ವಾಹನದಲ್ಲಿ 18 ಜಾನುವಾರುಗಳು ಪತ್ತೆಯಾಗಿದ್ದು ವಶಕ್ಕೆ ಪಡೆಯಲಾಗಿದೆ.
ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.