ಬೀಡಿ ಕಾರ್ಮಿಕರಿಗೆ ತುಟ್ಟಿಭತ್ತೆ: ಅಧಿಸೂಚನೆ ರದ್ದುಪಡಿಸಿದ ಹೈಕೋರ್ಟ್
ಮಂಗಳೂರು, ನ.11: ಬೀಡಿ ಮಾಲಕರ ಒತ್ತಡಕ್ಕೆ ಮಣಿದು ಬೀಡಿ ಕಾರ್ಮಿಕರಿಗೆ 2015ರ ಎಪ್ರಿಲ್ 1ರಿಂದ ನೀಡಬೇಕಾಗಿದ್ದ ತುಟ್ಟಿಭತ್ತೆಯನ್ನು ಸ್ಥಗಿತಗೊಳಿಸಿ ಸರಕಾರವು ಹೊರಡಿಸಿದ್ದ ಅಧಿಸೂಚನೆಯನ್ನು ರಾಜ್ಯ ಉಚ್ಚನ್ಯಾಯಾಲಯವು ರದ್ದುಪಡಿಸಿದೆ.
ಸರಕಾರ ಹೊರಡಿಸಿದ್ದ ಅಧಿಸೂಚನೆಯ ವಿರುದ್ಧ ಭಾರತೀಯ ಮಜ್ದೂರ್ ಸಂಘ (ಬಿಎಂಎಸ್)ವು ಹೈಕೋರ್ಟ್ನಲ್ಲಿ ದಾವೆ ಹೂಡಿ ಬೀಡಿ ಕಾರ್ಮಿಕರಿಗೆ ಸಿಗಬೇಕಾದ ತುಟ್ಟಿಭತ್ತೆಯನ್ನು ಸರಕಾರ ಸ್ಥಗಿತಗೊಳಿಸಿದ್ದು ಕಾನೂನುಬಾಹಿರ ಎಂದು ವಾದಿಸಿತ್ತು. ಬಿಎಂಎಸ್ನ ವಾದವನ್ನು ಪುರಸ್ಕರಿಸಿದ ಹೈಕೋರ್ಟ್, ಸ್ಥಗಿತಗೊಳಿಸಲ್ಪಟ್ಟ ಸರಕಾರದ ಅಧಿಸೂಚನೆಯನ್ನು ರದ್ದುಪಡಿಸಿದೆ.
ಬಿಎಂಎಸ್ ಪರವಾಗಿ ಬಿಎಂಎಸ್ ರಾಷ್ಟ್ರೀಯ ಉಪಾಧ್ಯಕ್ಷೆ ಹಾಗೂ ನ್ಯಾಯವಾದಿ ಮಂಗಳಾಂಬ ರಾವ್ ವಾದಿಸಿದ್ದರು. ಇದೀಗ ರಾಜ್ಯ ಉಚ್ಚ ನ್ಯಾಯಾಲಯವು ಸರಕಾರದ ಅಧಿಸೂಚನೆಯನ್ನು ರದ್ದುಪಡಿಸಿರುವುದರಿಂದ ಕಳೆದೊಂದು ವರ್ಷದಿಂದ ಕಾರ್ಮಿಕರಿಗೆ ಕೊಡಬೇಕಾಗಿದ್ದ ತುಟ್ಟಿಭತ್ತೆ ಯನ್ನು ಮಾಲಕರು ಕೂಡಲೇ ಕಾರ್ಮಿಕರಿಗೆ ಪಾವತಿಸಬೇಕೆಂದು ಬಿಎಂಎಸ್ ರಾಜ್ಯಾಧ್ಯಕ್ಷ ಕೆ.ವಿಶ್ವನಾಥ ಶೆಟ್ಟಿ ಒತ್ತಾಯಿಸಿದ್ದಾರೆ.