ನೋಟು ಅಮಾನ್ಯದಿಂದ ಆರ್ಥಿಕ ಅಸಮತೋಲನ: ಕುಕ್ಯಾನ್
ಮಂಗಳೂರು, ನ. 25: 1000 ಮತ್ತು 500 ರೂ. ಮುಖ ಬೆಲೆಯ ನೋಟುಗಳ ರದ್ದತಿಯ ನಂತರ ದೇಶದಲ್ಲಿ ಆರ್ಥಿಕ ಅಸಮತೋಲನ ಉಂಟಾಗಿದೆ. ಜನಸಾಮಾನ್ಯರು ಸಂಕಷ್ಟವನ್ನು ಅನುಭವಿಸುತ್ತಿದ್ದು, ಕೇಂದ್ರದ ಸರಕಾರದ ಈ ಕ್ರಮವನ್ನು ವಿರೋಧಿಸುವುದಾಗಿ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ)ದ ದ.ಕ. ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ಕುಕ್ಯಾನ್ ಅಭಿಪ್ರಾಯಪಟ್ಟರು.
ಸಿಪಿಐ ರಾಷ್ಟ್ರೀಯ ಕರೆಯಂತೆ ಇಂದು ಪಕ್ಷದ ದ.ಕ. ಮತ್ತು ಉಡುಪಿ ಜಿಲ್ಲಾ ಮಂಡಳಿ ವತಿಯಿಂದ ದ.ಕ. ಜಿಲ್ಲಾಧಿಕಾರಿ ಕಚೇರಿಯೆದುರು ನಡೆದ ‘ನೋಟು ರದ್ದತಿಯಿಂದ ಕಪ್ಪು ಹಣ ನಿಗ್ರಹವಾಯಿತೇ..?’ ಎಂಬ ಪ್ರತಿಭಟನಾ ಪ್ರದರ್ಶನವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಎಐಟಿಯುಸಿ ದ.ಕ. ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ಎಚ್. ರಾವ್ ಮಾತನಾಡಿ, ಚಲಾವಣೆಯಲ್ಲಿರುವ ಒಟ್ಟು ಹಣದಲ್ಲಿ ಶೇ. 86ರಷ್ಟಿದ್ದ 500-1000 ರೂ. ಗಳನ್ನು ರದ್ದುಗೊಳಿಸಿ 2000 ರೂ. ಮೌಲ್ಯದ ನೋಟನ್ನು ಜಾರಿಗೆ ತಂದಿರುವುದು ದೇಶದ ಆರ್ಥಿಕತೆಗೆ ಪೆಟ್ಟು ನೀಡಿದೆಯೇ ಹೊರತು ಕಪ್ಪುಹಣದ ನಿಯಂತ್ರಣಕ್ಕೆ ಹೆಚ್ಚಿನ ಪ್ರಯೋಜನವಾಗಿಲ್ಲ. ಏಕೆಂದರೆ ದೇಶದ ಒಟ್ಟು ಕಪ್ಪುಹಣದಲ್ಲಿ ಶೇ. 8 ರಿಂದ 10 ರಷ್ಟು ಮಾತ್ರ ನಗದು ರೂಪದಲ್ಲಿದ್ದು, ಉಳಿದ ಕಪ್ಪು ಹಣ ಬೆಳ್ಳಿ-ಬಂಗಾರ, ವಜ್ರ-ವೈಢೂರ್ಯಗಳ ಮತ್ತು ಸ್ಥಿರಾಸ್ತಿ-ಬೇನಾಮಿ ಆಸ್ತಿಗಳ ರೂಪದಲ್ಲಿವೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ಅಲ್ಲದೆ ಕೇಂದ್ರ ಸರಕಾರ ಅಧಿಕಾರಕ್ಕೆ ಬಂದೊಡನೆ ದೇಶ ವಿನಿಮಯ ನಿರ್ವಹಣಾ ಕಾಯ್ದೆಗೆ ತಿದ್ದುಪಡಿ ತಂದು ಭಾರತದಿಂದ ದೇಶಗಳಿಗೆ ಹಣ ವರ್ಗಾಯಿಸುವ ಪ್ರಕ್ರಿಯೆಯನ್ನು ಸುಲಭ ಮಾಡಿತು. ಇದರ ಪರಿಣಾಮ ಒಂದೇ ವರ್ಷದಲ್ಲಿ ಉದಾರೀಕೃತ ಸಂದಾಯ ಯೋಜನೆಯಡಿ ನಮ್ಮ ದೇಶದಿಂದ ಹರಿದುಹೋದ ಹಣ 1.325 ಬಿಲಿಯನ್ ಅಮೆರಿಕನ್ ಡಾಲರ್ಗಳಿಂದ ಏಕಾಏಕಿ 3.811ಕ್ಕೆ ಏರಿತು. ಭ್ರಷ್ಟರು ತಮ್ಮ ಕಪ್ಪುಹಣ ತೊಡಗಿಸಲು ಈ ಮಾರ್ಗ ಬಳಸಿಕೊಂಡಿದ್ದಾರೆ. ನೋಟ್ ರದ್ಧತಿ ಅತ್ಯಂತ ಗೌಪ್ಯ ಕ್ರಿಯೆಯಾಗಿರಲಿಲ್ಲ. 2016 ರ ಸೆಪ್ಟೆಂಬರ್ ತಿಂಗಳಲ್ಲಿ ದೇಶದ ಬ್ಯಾಂಕ್ಗಳ ಠೇವಣಿ 3,55,570 ಕೋಟಿ ರೂ. ಏರಿಕೆ ಕಂಡಿದ್ದು ಸಂಶಯಾಸ್ಪದವಾಗಿದೆ. ನೋಟ್ ರದ್ದತಿಯ ಬಗ್ಗೆ ಮುನ್ಸೂಚನೆ ದೊರೆತಿದ್ದರಿಂದ ನಗದು ರೂಪದಲ್ಲಿ ಕಪ್ಪುಹಣ ಹೊಂದಿರುವವರು ಅದನ್ನು ಸುರಕ್ಷಿತಗೊಳಿಸಿಕೊಂಡಿರುವ ಸಾಧ್ಯತೆ ಹೇರಳವಾಗಿದೆ ಎಂಬುದು ಪರಿಣಿತರ ಅಭಿಪ್ರಾಯ. ಅಲ್ಲದೆ ಬಿಜೆಪಿಯ ಪಶ್ಚಿಮ ಬಂಗಾಳದ ಖಾತೆಯಲ್ಲಿ ನವೆಂಬರ್ 1ರಿಂದ 8ರ ಒಳಗೆ 3 ಕೋಟಿ ರೂ. ಠೇವಣಿಯಾಗಿದೆ. ಇವೆಲ್ಲವನ್ನೂ ಗಮನಿಸಿದರೆ ನೋಟ್ ರದ್ದತಿ ಕಪ್ಪುಹಣ ನಿಗ್ರಹ ಉದ್ದೇಶದಿಂದ ಮಾಡಿಲ್ಲವೆಂದೂ ಸ್ಪಷ್ಟವಾಗುತ್ತದೆ ಎಂದು ಟೀಕಿಸಿದರು.
ತಾಲೂಕು ಕಾರ್ಯರ್ಶಿ ವಿ.ಎಸ್.ಬೇರಿಂಜ ಸ್ವಾಗತಿಸಿದರು. ಇಪ್ಟಾ ತಂಡದ ನಾಯಕ ಸುರೇಶ್ ಕುಮಾರ್ ಬಂಟ್ವಾಳ್ ಸಾಂದರ್ಭಿಕ ಹೋರಾಟ ಗೀತೆಯನ್ನು ಹಾಡಿದರು. ಬಂಟ್ವಾಳ ತಾಲೂಕು ಕಾರ್ಯದರ್ಶಿ ಬಿ. ಶೇಖರ್ ವಂದಿಸಿದರು. ಚಳವಳಿಯ ನೇತೃತ್ವವನ್ನು ಪಕ್ಷದ ನಾಯಕರಾದ ಕೆ. ಭಟ್, ಬಾಬು ಭಂಡಾರಿ, ಎಂ. ಕರುಣಾಕರ್, ಸುಲೋಚನಾ, ಚಿತ್ರಾಕ್ಷಿ, ಸರಸ್ವತಿ, ಕೆ. ಈಶ್ವರ್, ಶಿವಪ್ಪ ಕೋಟ್ಯಾನ್, ಎ.ಪಿ.ರಾವ್, ಭಾರತಿ ಪ್ರಶಾಂತ್, ತಿಮ್ಮಪ್ಪ ಕೆ., ಆರ್. ಡಿ ಸೋನ್ಸ್ ಮುಂತಾದವರು ವಹಿಸಿದ್ದರು.