ವಿವಾಹಿತ ಯುವಕ ನಾಪತ್ತೆ : ಪತ್ನಿಯಿಂದ ಪೊಲೀಸರಿಗೆ ದೂರು
ಪುತ್ತೂರು,ನ.29 : ಪುತ್ತೂರು ತಾಲೂಕಿನ ಕೊಡಿಪ್ಪಾಡಿ ಗ್ರಾಮದ ಕಲ್ಲಂದಡ್ಕ ನಿವಾಸಿಯಾಗಿರುವ ವಿವಾಹಿತ ಯುವಕನೊಬ್ಬ ನಾಪತ್ತೆಯಾಗಿರುವ ಕುರಿತು ತಡವಾಗಿ ಪುತ್ತೂರು ನಗರ ಪೊಲೀಸರಿಗೆ ದೂರು ನೀಡಲಾಗಿದೆ.
ಕೊಡಿಪ್ಪಾಡಿ ಗ್ರಾಮದ ಕಲ್ಲಂದಡ್ಕ ನಿವಾಸಿ ಹಾರಿಫ್ ಹುಸೈನ್ ಅವರ ಪುತ್ರ ಖಾಲಿದ್ (25) ನಾಪತ್ತೆಯಾಗಿರುವ ಯುವಕ. ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಖಾಲಿದ್ ಅವರು ಕಳೆದ ನ.17ರಂದು ಬೆಳಿಗ್ಗೆ ಕಲ್ಲಂಡದ್ಕದಲ್ಲಿರುವ ಸ್ನೇಹಿತನ ಮನೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟು ಹೋಗಿದ್ದರು.ಅಂದು ಮಧ್ಯಾಹ್ನ ವೇಳೆ ತನಗೆ ಕರೆ ಮಾಡಿ ನಾಳೆ ಬರುವುದಾಗಿ ತಿಳಿಸಿದ್ದರು. ಮರುದಿನವೂ ಬಾರದ ಹಿನ್ನಲೆಯಲ್ಲಿ ಅವರ ಮೊಬೈಲ್ಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ಆಫ್ ಆಗಿತ್ತು. ಈ ಹಿನ್ನಲೆಯಲ್ಲಿ ಮನೆಮಂದಿ ಸೇರಿಕೊಂಡು ಸಂಬಂಧಿಕರ ಹಾಗೂ ಪರಿಚಯಸ್ಥರ ಮನೆ ಸೇರಿದಂತೆ ಹಲವಾರು ಕಡೆಗಳಲ್ಲಿ ಹುಡುಕಾಡಿದರೂ ಅವರು ಪತ್ತೆಯಾಗಿಲ್ಲ ಎಂದು ಖಾಲಿದ್ ಅವರ ಪತ್ನಿ ಅಸ್ಮ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.