ಹಾಜಿ ಅಬ್ದುಲ್ಲಾ ಸಾರ್ವಜನಿಕ ಆಸ್ಪತ್ರೆಯ ಖಾಸಗೀಕರಣ ವಿರೋಧಿಸಿ ನಾಗರಿಕ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ಆರಂಭ
ಉಡುಪಿ, ಜ.3: ಉಡುಪಿಯ ಕೊಡುಗೈ ದಾನಿ ಹಾಜಿ ಅಬ್ದುಲ್ಲಾ ಅವರು ತನ್ನದೇ ಸ್ವಂತದ್ದಾದ 4.07 ಎಕರೆ ಜಾಗದಲ್ಲಿ ಸಾರ್ವಜನಿಕರಿಗಾಗಿ ನಿರ್ಮಿಸಿ ಕೊಟ್ಟ ಹೆಂಗಸರ ಮತ್ತು ಮಕ್ಕಳ ಆಸ್ಪತ್ರೆಯನ್ನು ದುಬೈಯಲ್ಲಿ ನೆಲೆಸಿರುವ ಉಡುಪಿಯ ಉದ್ಯಮಿ ಬಿ.ಆರ್.ಶೆಟ್ಟಿ ಅವರಿಗೆ ಗುತ್ತಿಗೆ ಆಧಾರದಲ್ಲಿ ನೀಡಲು ನಿರ್ಧರಿಸಿರುವುದನ್ನು ವಿರೋಧಿಸಿ ಜಿಲ್ಲೆಯ 12ಕ್ಕೂ ಅಧಿಕ ಸಂಘಟನೆಗಳು ಸೇರಿ ರಚಿಸಿದ ನಾಗರಿಕ ಒಕ್ಕೂಟದ ಬೃಹತ್ ಪ್ರತಿಭಟನಾ ರ್ಯಾಲಿಯು ಉಡುಪಿಯ ಜೋಡುಕಟ್ಟೆಯಿಂದ ಆರಂಭವಾಗಿ ಚತ್ತರಂಜನ್ ಸರ್ಕಲ್ ವರೆಗೆ ಸಾಗಿತು.
ಮೀನಾಕ್ಷಿ ಭಂಡಾರಿಯವರು ಪ್ರತಿಭಟನಾ ರ್ಯಾಲಿಗೆ ಚಾಲನೆ ನೀಡಿದರು.
ನಂತರ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಇದು ಜನರ ಆಸ್ಪತ್ರೆ. ಯಾವುದೇ ಕಾರಣಕ್ಕೂ ಇದು ಖಾಸಗಿ ಕಂಪೆನಿಗಳ ಪಾಲಾಗಬಾರದು ಎಂದರು.
ದಾನಿ ಹಾಜಿ ಅಬ್ದುಲ್ಲಾ ರ ಸಂಬಂಧಿ ಖುರ್ಷಿದ್ ಮಾತನಾಡಿ, ಈ ಆಸ್ಪತ್ರೆಇಂದ ಜನರಿಗೆ ಪ್ರಯೋಜನವಿದೆ. ಸರಕಾರ ಖಾಸಗೀಕರಣದ ನಿರ್ಧಾರವನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮನೋವೈದ್ಯ ಡಾ.ಪಿ.ವಿ.ಭಂಡಾರಿ, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಯಾಸಿನ್ ಮಲ್ಪೆ ಮತ್ತು ಇತರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.