ಜ್ಯೋತಿಷಿಯಿಂದ ಯುವತಿಗೆ ಲೈಂಗಿಕ ಕಿರುಕುಳ: ದೂರು
ಮಂಗಳೂರು, ಜ.7: ಮಂಗಳೂರಿನ ಅತ್ತಾವರದಲ್ಲಿರುವ ಜ್ಯೋತಿಷಿಯೋರ್ವ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಯುವತಿಯೋರ್ವರು ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.
ಅತ್ತಾವರದಲ್ಲಿ ವೈಷ್ಣವಿ ಜ್ಯೋತಿಷ್ಯಾಲಯ ನಡೆಸುತ್ತಿರುವ ರಾಮಕೃಷ್ಣ ಶರ್ಮ ಎಂಬಾತನ ವಿರುದ್ಧ ಯುವತಿ ದೂರು ನೀಡಿದ್ದಾರೆ. ರಾಮಕೃಷ್ಣ ಶರ್ಮ ತನ್ನ ಬಳಿ ಜ್ಯೋತಿಷ್ಯವನ್ನು ಕೇಳಲು ಬರುವ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ ಆರೋಪ ಕೇಳಿಬಂದಿತ್ತು.
ಈ ಹಿನ್ನೆಲೆಯಲ್ಲಿ ಅಖಿಲ ಭಾರತ ವಿಚಾರವಾದಿ ವೇದಿಕೆಯ ಅಧ್ಯಕ್ಷ ನರೇಂದ್ರ ನಾಯಕ್ ಅವರು ಇತ್ತೀಚೆಗೆ ಜ್ಯೋತಿಷ್ಯಾಲಯದ ವಂಚನೆಯನ್ನು ಬಯಲಿಗೆಳೆಯವ ಉದ್ದೇಶದಿಂದ ಯುವತಿಯೊಬ್ಬಳನ್ನು ತನ್ನ ಮಗಳೆಂದು ಹೇಳಿಕೊಂಡು ಈತನ ಬಳಿ ಕರೆದುಕೊಂಡು ಹೋಗಿದ್ದರು. ಅಲ್ಲಿ ಜ್ಯೋತಿಷಿಯು ಆಕೆಯ ಸಂತಾನಭಾಗ್ಯಕ್ಕೆ 10,000 ಹಣವನ್ನು ಕೇಳಿದ್ದನು ಎನ್ನಲಾಗಿದೆ. ಈ ಬಗ್ಗೆ ಜ್ಯೋತಿಷಿಯ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು. ಈ ಸುದ್ದಿಯನ್ನು ತಿಳಿದ ಯುವತಿಯೋರ್ವರು ನರೇಂದ್ರ ನಾಯಕ್ರಿಗೆ ೆನ್ ಮಾಡಿ ಈ ಜ್ಯೋತಿಷಿಯಿಂದ ತನಗೂ ವಂಚನೆಯಾಗಿದೆ ಎಂದು ಹೇಳಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಇದೀಗ ನರೇಂದ್ರ ನಾಯಕ್ರ ಮಾರ್ಗದರ್ಶನದಲ್ಲಿ ಯುವತಿ ಇಂದು ದಕ್ಷಿಣ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜ್ಯೋತಿಷ್ಯವನ್ನು ಕೇಳಲು ಹೋದ ತನಗೆ ರಾಮಕೃಷ್ಣ ಶರ್ಮ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಯುವತಿ ದೂರಿನಲ್ಲಿ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.